ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನ ಸಮೀಪಿಸುತ್ತಿದ್ದಂತೆ, ನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ತರಾತುರಿಯಲ್ಲಿ ನಡೆಯುತ್ತಿವೆ.
ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ಶಾಸಕರು ವಾಸ್ತವ್ಯ ಹೂಡಲಿರುವ ಹೋಟೆಲ್ಗಳು ಹಾಗೂ ಪ್ರವಾಸಿ ಮಂದಿರಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಹಾನಗರ ಪಾಲಿಕೆ ಆದ್ಯತೆ ಮೇರೆಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿದೆ.
ಆದರೆ, ಉಳಿದ ಮಾರ್ಗದ ರಸ್ತೆಗಳತ್ತ ಅಧಿಕಾರಿಗಳು ಗಮನ ಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗುಂಡಿಗಳನ್ನು ಮುಚ್ಚಲಾಗುತ್ತಿದೆ: ಈ ಬಾರಿ ಮಳೆಗಾಲದಲ್ಲಿ ನಗರದ ಹಲವು ಮಾರ್ಗಗಳ ರಸ್ತೆ ಹದಗೆಟ್ಟಿವೆ. ಇಲ್ಲಿ ಸಂಚರಿಸಲು ವಾಹನ ಸವಾರರು ಪ್ರಯಾಸಪಡುತ್ತಿದ್ದಾರೆ. ಆದರೆ, ಅಧಿವೇಶನ ವೇಳೆ ರಸ್ತೆ ನಿರ್ಮಾಣಕ್ಕಾಗಿ ಮಹಾನಗರ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ಬಂದಿಲ್ಲ. ಹೀಗಾಗಿ, ಇಲ್ಲಿನ ಶಹಾಪುರದ ಎಸ್ಪಿಎಂ ರಸ್ತೆ, ಕಪಿಲೇಶ್ವರ ಕಾಲೊನಿ ರಸ್ತೆ, ಸಂಭಾಜಿ ಗಲ್ಲಿ, ಬಿ.ಎಸ್.ಯಡಿಯೂರಪ್ಪ ಮಾರ್ಗ ಮತ್ತಿತರ ರಸ್ತೆಗಳಲ್ಲಿನ ಗುಂಡಿ ಮುಚ್ಚಲಾಗುತ್ತಿದೆ. ಜತೆಗೆ, ನಗರದ ಮುಖ್ಯರಸ್ತೆಗಳಲ್ಲಿನ ವಿಭಜಕಗಳನ್ನು ತೊಳೆದು, ಅವುಗಳಿಗೆ ಬಣ್ಣ ಬಳಿಯಲಾಗುತ್ತಿದೆ.
‘ಸಚಿವರು, ಶಾಸಕರು ಸಂಚರಿಸುವ ರಸ್ತೆಗಳನ್ನು ದುರಸ್ತಿ ಮಾಡುತ್ತಿರುವುದೇನೋ ಸರಿ. ಆದರೆ, ಹದಗೆಟ್ಟಿರುವ ಮಹಾಂತೇಶ ನಗರ ಮುಖ್ಯರಸ್ತೆ ಸುಧಾರಣೆಗೆ ಕ್ರಮವಹಿಸುತ್ತಿಲ್ಲ. ಗಣ್ಯರಷ್ಟೇ ಅಲ್ಲ, ಜನಸಾಮಾನ್ಯರು ಓಡಾಡುವ ರಸ್ತೆಗಳೂ ಸುಧಾರಣೆಯಾಗಬೇಕು. ಅಧಿಕಾರಿಗಳು ದ್ವಿಮುಖ ನೀತಿ ಅನುಸರಿಸಬಾರದು’ ಎಂದು ಕನ್ನಡ ಹೋರಾಟಗಾರ ಶಂಕರ ಬಾಗೇವಾಡಿ ದೂರಿದರು.
‘