Breaking News

V.R.L.​ ಸಂಸ್ಥೆ ಹೆಸರಲ್ಲಿ ನಕಲಿ ವೆಬ್​ಸೈಟ್​ ತೆರೆದು ವಂಚಿಸುತ್ತಿದ್ದವರ ಬಂಧನ..

Spread the love

ಬೆಂಗಳೂರು: ವಿಆರ್‌ಎಲ್ ಸಂಸ್ಥೆ ಹೆಸರಿನ ಮೂವರ್ಸ್‌ ಆಯಂಡ್ ಪ್ಯಾಕರ್ಸ್‌ ಎಂಬ ನಕಲಿ ವೆಬ್‌ಸೈಟ್ ತೆರೆದು ವಂಚಿಸುತ್ತಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಬ್ರಹ್ಮದೇವ್ ಯಾದವ್ (25), ಮುಕೇಶ್ ಕುಮಾರ್ ಯಾದವ್ (20), ವಿಜಯ್ ಕುಮಾರ್ ಯಾದವ್ (22) ಬಂಧಿತರು.

ಆರೋಪಿಗಳಿಂದ ದ್ವಿಚಕ್ರ ವಾಹನ ಹಾಗೂ ನಾಲ್ಕು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರೊಬ್ಬರು ಇತ್ತೀಚೆಗೆ ತಮ್ಮ ದ್ವಿಚಕ್ರ ವಾಹನವನ್ನು ಬೆಂಗಳೂರು ನಗರದಿಂದ ಸಾಗರಕ್ಕೆ ಸಾಗಿಸಲು ಪ್ಯಾಕರ್ಸ್‌ ಆಯಂಡ್ ಮೂವರ್ಸ್‌ ಸಂಸ್ಥೆಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕುವಾಗ, ವಿಆರ್‌ಎಲ್ ಮೂವರ್ಸ್‌ ಆಯಂಡ್ ಪ್ಯಾಕರ್ಸ್‌ ಹೆಸರಿನ ವೆಬ್‌ಸೈಟ್ ಸಿಕ್ಕಿದೆ. ಈ ವೆಬ್‌ಸೈಟ್‌ನಲ್ಲಿ ನೀಡಿದ್ದ ಮೊಬೈಲ್​ಫೋನ್​ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಆರೋಪಿಯ ದ್ವಿಚಕ್ರ ವಾಹನ ಸಾಗಿಸಲು ಒಂದು ಸಾವಿರ ರೂ. ಕೇಳಿದ್ದಾನೆ. ಇದಕ್ಕೆ ಒಪ್ಪಿದ ಬಳಿಕ ಇಬ್ಬರು ಆರೋಪಿಗಳು ದೂರುದಾರರ ಮನೆಗೆ ಬಂದು ದ್ವಿಚಕ್ರ ವಾಹನ ಪ್ಯಾಕ್ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದಾರೆ.

ಮಾರನೇ ದಿನ ಆರೋಪಿಗಳು ದ್ವಿಚಕ್ರ ವಾಹನ ಸಾಗಿಸಲು 8 ಸಾವಿರ ರೂ. ನೀಡುವಂತೆ ದೂರುದಾರರ ವಾಟ್ಸ್​ಆಯಪ್​​ಗೆ ಬಿಲ್ ಕಳುಹಿಸಿದ್ದಾರೆ. ಎಂಟು ಸಾವಿರ ರೂ. ನೀಡಿದರೆ ಮಾತ್ರ ದ್ವಿಚಕ್ರ ವಾಹನ ಸಾಗಿಸುತ್ತೇವೆ. ಇಲ್ಲವಾದರೆ, ದ್ವಿಚಕ್ರ ವಾಹನ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ದೂರುದಾರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹೆಚ್ಚಿನ ಹಣಕ್ಕೆ ಬೇಡಿಕೆ: ನಗರದ ಯಶವಂತಪುರದಲ್ಲಿ ನೆಲೆಸಿದ್ದ ಬಿಹಾರ ಮೂಲದ ಈ ಆರೋಪಿಗಳು ವಿಆರ್‌ಎಲ್ ಸೇರಿದಂತೆ ವಿವಿಧ ಹೆಸರುಗಳಲ್ಲಿ ಪ್ಯಾಕರ್ಸ್‌ ಆಯಂಡ್ ಮೂವರ್ಸ್‌ ಸಂಸ್ಥೆಗಳ ನಕಲಿ ವೆಬ್‌ಸೈಟ್ ತೆರೆದು ಸಂಪರ್ಕ ಸಂಖ್ಯೆ ನೀಡುತ್ತಿದ್ದರು. ಈ ವೆಬ್‌ಸೈಟ್‌ಗಳಲ್ಲಿ ನೀಡಲಾದ ಮೊಬೈಲ್​ಫೋನ್​ ಸಂಖ್ಯೆಗೆ ಕರೆ ಮಾಡುವ ಗ್ರಾಹಕರ ಬಳಿ ಮೊದಲಿಗೆ ಕಡಿಮೆ ಮೊತ್ತಕ್ಕೆ ವಸ್ತುಗಳನ್ನು ಸಾಗಿಸಲು ಒಪ್ಪುತಿದ್ದರು. ಬಳಿಕ ಗ್ರಾಹಕರ ಮನೆಗೆ ತೆರಳಿ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ತರುತ್ತಿದ್ದರು. ಮಾರನೇ ದಿನ ದುಬಾರಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ಹಣ ಕೊಡಲು ನಿರಾಕರಿಸಿದರೆ, ವಸ್ತು ವಾಪಸ್ ನೀಡುವುದಿಲ್ಲ ಎಂದು ಹೆದರಿಸ್ತುತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ನಗರದಲ್ಲಿ ಇದೇ ರೀತಿ ಹಲವರಿಂದ ದುಬಾರಿ ಹಣ ಸುಲಿದಿರುವ ಸಾಧ್ಯತೆ ಇದ್ದು, ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ