ಬಾಗಲಕೋಟೆ: ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನ ಕಾರ್ಯಕ್ರಮಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 325 ಹೆಚ್ಚು ಬಸ್ಗಳನ್ನು ಬುಕಿಂಗ್ ಮಾಡಲಾಗಿದೆ.
ಇನ್ನು ನೂರಾರು ಬಸ್ಗಳು ಬುಕಿಂಗ್ ಆಗುವ ನಿರೀಕ್ಷೆ ಇದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 50 ಬಸ್ಗಳು ಬುಕಿಂಗ್ ಆಗಿವೆ. ಹಾವೇರಿಯಲ್ಲಿ 90, ಗದುಗಿನಲ್ಲಿ 85 ಹಾಗೂ ಧಾರವಾಡ ಜಿಲ್ಲೆಯಲ್ಲಿ 90 ಬಸ್ಗಳು ಬುಕಿಂಗ್ ಆಗಿವೆ. ಇದರಿಂದ ಸಂಸ್ಥೆಗೆ ₹39 ಲಕ್ಷ ಆದಾಯ ಬರಲಿದೆ.
ಶಕ್ತಿ ಪ್ರದರ್ಶನ: ಮುಂದಿನ ವಿಧಾನಸಭೆ ಚುನಾವಣೆಯ ಟಿಕೆಟ್ ಅಂತಿಮಗೊಳಿಸುವಲ್ಲಿ ಸಿದ್ದರಾಮಯ್ಯ ಅವರದ್ದು ನಿರ್ಣಾಯಕ ಪಾತ್ರ ಇರಲಿದೆ. ಜತೆಗೆ ಸರ್ಕಾರ ಬಂದರೆ ಮುಖ್ಯಮಂತ್ರಿಯೂ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು ಮುಂದಾಗಿದ್ದಾರೆ.
ಕಾರ್ಯಕರ್ತರನ್ನು ಕರೆದುಕೊಂಡು ಹೋಗಲು ಬಸ್ಗಳನ್ನು ಬುಕಿಂಗ್ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದಾರು ಸಾವಿರ ಕಾರ್ಯಕರ್ತರನ್ನು ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಿದ್ದರಾಮಯ್ಯ ಅವರ ಕ್ಷೇತ್ರವಾದ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹೊರಟ್ಟಿದ್ದಾರೆ.