ಬೆಂಗಳೂರು: ಇಲ್ಲಿಯವರೆಗೂ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಾಹಿತಿಗಳ ಹೆಸರು ಮತ್ತು ಪಠ್ಯವನ್ನು ಕೈಬಿಡಲಾಗುತ್ತಿದೆ ಎಂಬ ವಿವಾದ ಇದೀಗ, ಮಠ-ಮಂದಿರಗಳತ್ತ ತಿರುಗಿದೆ.
ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಕೈಂಕರ್ಯಗಳನ್ನೇ ಬಿಡಲಾಗಿದೆ.
ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ನಡೆಸುತ್ತಿದ್ದರು. ಈ ಮೂಲಕ ಮಠವು ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ಮೂಲ ಶಿಕ್ಷಣ ಮತ್ತು ವೃತ್ತಿ ಶಿಕ್ಷಣವನ್ನು ಕಾಲೇಜುಗಳಲ್ಲಿ ನೀಡುತ್ತಿದೆ ಎನ್ನುವ ಸಾಲುಗಳನ್ನು ಕೈಬಿಡಲಾಗಿದೆ. ಇಲ್ಲಿಯವರೆಗೂ ಕುವೆಂಪು ಅವರನ್ನು ಅವಹೇಳನ ಮಾಡಲಾಗಿದೆ ಎನ್ನುತ್ತಿದ್ದ ಒಕ್ಕಲಿಗ ಸಮುದಾಯಕ್ಕೆ ಆದಿಚುಂಚನಗಿರಿ ಸ್ವಾಮೀಜಿಗಳು ಮಾಡುತ್ತಿದ್ದ “ಅನ್ನ, ಅಕ್ಷರ ದಾಸೋಹ’ ಎಂಬ ಸಾಲುಗಳನ್ನು ಬಿಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಅದೇ ರೀತಿ ಜಾತಿ, ಮತ, ಧರ್ಮವನ್ನು ಪರಿಗಣಿಸದೆ ಸರ್ವಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದ ಸಿದ್ಧಗಂಗಾ ಮಠದ ಶ್ರೀಗಳ ಸಾಧನೆಯನ್ನು ಕೈಬಿಡುವ ಪ್ರಮೇಯವೇನಿತ್ತು ಎಂದು ಲಿಂಗಾಯತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.