ಮೈಸೂರು: ಪ್ರೀತಿಯ ಹೆಸರಲ್ಲಿ ಮೋಸ ಹೋದ ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಪ್ರೀತಿಯ ಬಲೆಗೆ ಬಿದ್ದು ತನ್ನ ದೇಹವನ್ನು ಪ್ರಿಯಕರನಿಗೆ ಒಪ್ಪಿಸಿದ ಯುವತಿ ಇಂದು ವಂಚಿತಳಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ.
ಕಂದೇಗಾಲ ಗ್ರಾಮದ ಪ್ರಭುಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇಬ್ಬರು ಒಂದೇ ಗ್ರಾಮದವರು. ಪ್ರಿಯಕರ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಭುಸ್ವಾಮಿ ಬರ್ತಡೇ ಆಚರಣೆಗೆಂದು ಪ್ರೇಯಸಿಯನ್ನೂ ಆಹ್ವಾನಿಸಿದ್ದ. ಈ ವೇಳೆ ಯುವತಿ ಮದುವೆ ಪ್ರಸ್ತಾಪ ಮಾಡಿದ್ದಳು. ಆದರೆ, ಪ್ರಭು ಸ್ನೇಹಿತರ ಎದುರೇ ಯುವತಿಯ ಕಪಾಳಕ್ಕೆ ಹೊಡೆದು ಅವಮಾನಿಸಿದ್ದ. ಇದಾದ ಮೂರು ದಿನಗಳ ಬಳಿಕ ಪ್ರಭುಸ್ವಾಮಿ ಮನೆಗೆ ಆಗಮಿಸಿ ಪ್ರಿಯಕರನ ತಾಯಿ ಮುಂದೆ ಎಲ್ಲ ವಿಚಾರವನ್ನು ಯುವತಿ ಹೇಳಿದ್ದಳು.
ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮೂರು ದಿನಗಳ ಹಿಂದೆ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಕಪಾಳಕ್ಕೆ ಹೊಡೆದು ಅಪಮಾನ ಮಾಡಿದ್ದಾನೆ ಎಂದು ಆರೋಪಿಸಿ, ಪ್ರಿಯತಮನ ಕುಟುಂಬಸ್ಥರ ಎದುರೇ ವಿಷ ಸೇವನೆ ಮಾಡಿದ್ದಾಳೆ.
ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವತಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
Laxmi News 24×7