ಬೆಳಗಾವಿ: ಈಗಾಗಲೇ ಕಾಂಗ್ರೆಸ್ ಬಿಟ್ಟು ಹೋದವರು ಮತ್ತೇ ವಾಪಸ್ ಆದರೆ ಆಶ್ಚರ್ಯವೆನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲೆಯ ಗೋಕಾಕ್ನಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ನ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವುದು ಸತ್ಯ.
ಹೀಗಾಗಿ ಮುಂದಿನ ದಿನದಲ್ಲಿ ಕಾಂಗ್ರೆಸ್ ತೊರೆದು ಹೋದವರು ಮತ್ತೆ ಬಂದರೆ ಅಚ್ಚರಿ ಪಡುವಂತದ್ದು ಏನಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಸಿದ್ಧರಾಮಯ್ಯ ನನ್ನ ಗುರುಗಳು ಎಂಬ ಲಖನ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ,ಲಖನ್ ಕಾಂಗ್ರೆಸ್ ಗೆ ಬರೋದಿಲ್ಲ, ನಾವು ಕರೆಯೋದಿಲ್ಲ ಈ ಚರ್ಚೆ ಅನಾವಶ್ಯಕ ಎಂದಿದ್ದಾರೆ.
ಬಿಜೆಪಿ ಬಸ್ ಹೌಸ್ಫುಲ್ ಆಗಿದೆ..
ಲಖನ್ ಬಿಜೆಪಿಯಲ್ಲಿದ್ದಾರೆ, ಸುಮ್ಮನೇ ವಿಚಾರ ಹೇಳಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇಲ್ಲಿ ಗುಡುಗು ಸಿಡಿಲು ಅಂತಾ ಅಬ್ಬರಿಸುತ್ತಾರೆ. ಆದ್ರೆ ಮಳೆ ಮಾತ್ರ ಆಗಲ್ಲ ಎನ್ನುವಂತೆ ಈ ರೀತಿ ಹೇಳಿಕೆ ನೀಡಿ ಎರಡು ಕಡೆ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಸಚಿವರಾಗಿ, ಶಾಸಕರಾಗಿದ್ದರೂ ಗೋಕಾಕ್ ನಲ್ಲಿ ಒಂದು ಡಿಗ್ರಿ ಕಾಲೇಜು ನಿರ್ಮಾಣ ಮಾಡಿಲ್ಲ. ಸದ್ಯ ಬಿಜೆಪಿಗೆ ಶಾಸಕರನ್ನು ಕರೆದೊಯ್ಯುವ ಮಾತುಗಳನ್ನು ಹೇಳ್ತಿದ್ದಾರೆ. ಬಿಜೆಪಿ ಬಸ್ ಹೌಸ್ಫುಲ್ ಆಗಿದೆ ರಮೇಶ್ ಜಾರಕಿಹೊಳಿ ಮತ್ತೆ 16 ಜನರನ್ನ ಎಲ್ಲಿ ಕೂರಿಸುತ್ತಾರೆ ಗೊತ್ತಿಲ್ಲ.
ರಮೇಶ್ ಜಾರಕಿಹೊಳಿಗೆ ರಾಜಕೀಯ ಅಂದ್ರೆ ವ್ಯಾಪಾರ ಇದ್ದ ಹಾಗೆ. ಬಿಜೆಪಿಗೆ ಹೋಗುವಾಗ ಕಾಂಗ್ರೆಸ್ ಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ, ಕಾಂಗ್ರೆಸ್ ಗೆ ಹೋಗುವಾಗ ಬಿಜೆಪಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಹೀಗೆ ಆಗಾಗ ಹುಸಿಬಾಂಬ್ಗಳನ್ನು ಹಾಕುತ್ತಿರುತ್ತಾರೆ ಆ ಬಾಂಬ್ಗಳಿಗೆ ನಾವು ಹೆದರಲ್ಲ ಎಂದು ಸತೀಶ್ ಜಾರಕಿಹೊಳಿ ಕೌಂಟರ್ ನೀಡಿದ್ದಾರೆ.