ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ವಿಷ್ಣುವರ್ಧನ್ ಜೊತೆ ತಾವಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು ಸಾಹಸ ಸಿಂಹನಿಗೆ ವಿಶ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್, ರಮೇಶ್ ಅರವಿಂದ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿವೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು ನಟ ವಿಷ್ಣುವರ್ಧನ್. ಅಭಿಮಾನಿಗಳ ಪಾಲಿನ ‘ಸಾಹಸ ಸಿಂಹ’ನಾಗಿ ಅವರು ತೆರೆಮೇಲೆ ಮಿಂಚಿದರು. 200 ಸಿನಿಮಾಗಳಲ್ಲಿ ನಟಿಸಿ ಬಣ್ಣದ ಲೋಕದಲ್ಲಿ ಅಮರರಾದರು. ಇಂದು (ಸೆ.18) ವಿಷ್ಣುವರ್ಧನ್ ಜನ್ಮದಿನ. ಅವರು ಭೌತಿಕವಾಗಿ ಬದುಕಿದಿದ್ದರೆ ಈ ವರ್ಷ 71ನೇ ವಸಂತಕ್ಕೆ ಕಾಲಿಡಬೇಕಿತ್ತು. ಅವರ ಹುಟ್ಟುಹಬ್ಬದ ದಿನವಾದ ಇಂದು ಅಸಂಖ್ಯಾತ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡ ವಿಷ್ಣುವರ್ಧನ್ ಜೊತೆ ತಾವಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು ಸಾಹಸ ಸಿಂಹನಿಗೆ ವಿಶ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್, ರಮೇಶ್ ಅರವಿಂದ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿವೆ.
ಆಪ್ತಮಿತ್ರ, ಏಕದಂತ, ವರ್ಷ ಮುಂತಾದ ಸಿನಿಮಾಗಳಲ್ಲಿ ರಮೇಶ್ ಅರವಿಂದ್ ಮತ್ತು ವಿಷ್ಣುವರ್ಧನ್ ಜೊತೆಯಾಗಿ ನಟಿಸಿದ್ದರು. ಹಾಗಾಗಿ ಇಬ್ಬರ ನಡುವೆ ಸ್ನೇಹವಿತ್ತು. ‘ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲಿ.. ವಿಷ್ಣುವರ್ಧನ್ ನೆನಪುಗಳು’ ಎಂದು ಅವರೊಂದಿಗಿನ ಫೋಟೋವನ್ನು ರಮೇಶ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ವಿಶ್ ಮಾಡಿದ್ದಾರೆ.
‘ಕಿಚ್ಚ’ ಸುದೀಪ್ ಅವರಿಗೂ ವಿಷ್ಣುವರ್ಧನ್ ಮೇಲೆ ಅಪಾರ ಗೌರವ ಮತ್ತು ಅಭಿಮಾನ. ‘ಇವರಿಗೆ ಅಭಿಮಾನಿಗಳ ಸಾಗರವೇ ಇದೆ. ಅದರಲ್ಲಿ ನಾನೊಂದು ಹನಿ ಮಾತ್ರ. ಇಂದು ಮಾತ್ರವಲ್ಲ, ನೀವು ಪ್ರತಿ ದಿನ ಪ್ರತಿ ಕ್ಷಣ ನೆನಪಾಗುತ್ತೀರಿ’ ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ. ವಿಷ್ಣು ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಕುಟುಂಬದವರು ಮೈಸೂರಿನಲ್ಲಿ ಈ ವರ್ಷ ಹುಟ್ಟುಹಬ್ಬದ ಆಚರಿಸುತ್ತಿದ್ದಾರೆ. ಆ ಬಗ್ಗೆ ನಟ ಅನಿರುದ್ಧ ಮಾಹಿತಿ ನೀಡಿದ್ದಾರೆ. ‘ಎಚ್.ಡಿ. ಕೋಟೆ ರಸ್ತೆಯಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಜಾಗದಲ್ಲಿ ಬೆಳಗ್ಗೆ 11 ಗಂಟೆಗೆ ನಾವು ಜನ್ಮದಿನ ಆಚರಿಸುತ್ತೇವೆ. ಭಾರತಿ ವಿಷ್ಣುವರ್ಧನ್, ಕೀರ್ತಿ ಸೇರಿದಂತೆ ನಾವೆಲ್ಲ ಇರುತ್ತೇವೆ. ಅಭಿಮಾನಿಗಳು ಬರಲೇಬೇಕು ಅಂತ ನಾನು ಹಠ ಹಿಡಿಯುತ್ತಿಲ್ಲ. ಯಾಕೆಂದರೆ ಕೊರೊನಾ ಇದೆ. ಬರಬೇಕು ಎಂಬ ಆಸೆ ಇರುವವರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಬನ್ನಿ’ ಎಂದು ಅನಿರುದ್ಧ ಹೇಳಿದ್ದಾರೆ.