ಬೆಳಗಾವಿ: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರಿ ಮಳೆಯಿಂದ ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಗ್ರಾಮ ನದಿ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಚಿಕ್ಕಾಲಗುಡ್ಡ ಗ್ರಾಮದಲ್ಲಿ ಹೊಸದಾಗಿ ಕಟ್ಟಿಕೊಂಡಿದ್ದ ಮನೆಗಳು ಸಂಪೂರ್ಣ ಜಲಾವೃತವಾಗಿವೆ. 2019ರಲ್ಲಿ ಬಂದ ಪ್ರವಾಹದಲ್ಲಿ ಗ್ರಾಮಸ್ಥರು ಮನೆ ಕಳೆದುಕೊಂಡಿದ್ದರು. ಹೊಸದಾಗಿ ಕಟ್ಟಿಸಿಕೊಂಡಿದ್ದ ಸುಮಾರು 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಗ್ರಾಮಸ್ಥರಿಗೆ ಮನೆಗಳನ್ನು ಕಳೆದುಕೊಳ್ಳುವ ಭೀತಿ ಶುರುವಾಗಿದೆ.
ಇನ್ನು ಚಿಕ್ಕಮಗಳೂರಿನಲ್ಲೂ ಮಳೆ ಮುಂದುವರಿದಿದೆ. ಮಳೆಗೆ ನೆನೆದ ಮನೆಯೊಂದು ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಏಕಾಏಕಿ ಕುಸಿದುಬಿದ್ದಿದೆ. ಈ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಜಯರಾಂ ಎಂಬುವರ ಮನೆ ಭಾರೀ ಮಳೆಯಿಂದ ಕುಸಿದು ಹೋಗಿದೆ. ಮನೆ ಕುಸಿಯುತ್ತಿರುವ ವೇಳೆ ಮನೆಯಿಂದ ಹೊರಗೆ ಓಡಿ ಜಯರಾಂ ಮತ್ತು ಅವರ ಪತ್ನಿ, ಮಗ ಪ್ರಾಣ ಉಳಿಸಿಕೊಂಡಿದ್ದಾರೆ.
ಕುಸಿದ ಮನೆ ಗೋಡೆ
ಕಲಬುರಗಿ ಜಿಲ್ಲೆಯಲ್ಲೂ ಭಾರಿ ಮಳೆಯಿಂದ ಮನೆಗಳು ಜಲಾವೃತವಾಗಿವೆ. ಜಿಲ್ಲೆಯ ಕಾಳಗಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕೆಲವು ಮನೆಗಳು ಜಲಾವೃತವಾಗಿದ್ದು, ದಿನಸಿ, ಅಗತ್ಯ ವಸ್ತುಗಳು ನೀರುಪಾಲಾಗಿವೆ. ಮಳೆ ನೀರು ಮತ್ತು ಹಳ್ಳದ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಪರದಾಟ ಪಡುತ್ತಿದ್ದಾರೆ.
ಮನೆಗಳು ಜಲಾವೃತ