ಚಾಮರಾಜನಗರ: ಲಾಕ್ ಡೌನ್ನಲ್ಲಿ ಲೋಕೋಪಯೋಗಿ ಅಧಿಕಾರಿಗಳು ಭರ್ಜರಿ ಬಾಡೂಟ ಪಾರ್ಟಿ ಮಾಡಿರುವ ಘಟನೆ ಚಾಮರಾಜನಗರ ಸಂತೇಮರಳ್ಳಿ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದಿದೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಇದೇ ತಿಂಗಳ 30ರಂದು ನಿವೃತ್ತಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಯೊಬ್ಬರಿಗೆ ಬಿಳ್ಕೊಡುಗೆ ನೀಡುವ ನೆಪದಲ್ಲಿ ಅಧಿಕಾರಿಗಳು ಭರ್ಜರಿ ಪಾರ್ಟಿ ನಡೆಸಿದ್ದಾರೆ ಎನ್ನಲಾಗಿದೆ.
ಕೊರೊನಾ ಲಾಕ್ಡೌನ್ ಹಾಗೂ ಮಾರ್ಗಸೂಚಿಗಳನ್ನು ಅಧಿಕಾರಿಗಳು ಉಲ್ಲಂಘನೆ ಮಾಡಿದ್ದು, ಸುಮಾರು 80 ರಿಂದ 100 ಜನರಿಗೆ ಬಾಡೂಟ ಏರ್ಪಡಿಸಿದ್ದರು ಎನ್ನಲಾಗಿದೆ. ಕೊರೊನಾ ಮಾರ್ಗಸೂಚಿಗಳ ಅನ್ವಯ ಯಾವುದೇ ಪಾರ್ಟಿ, ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಮದುವೆ ಸಮಾರಂಭಗಳಿಗೂ ಕೇವಲ 40 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಪಾರ್ಟಿಯಲ್ಲಿ 100ಕ್ಕೂ ಹೆಚ್ಚು ಜನರು ಸೇರಿದ್ದರು ಎನ್ನಲಾಗಿದ್ದು. ನಿನ್ನೆ ಸರ್ಕಾರಿ ಅತಿಥಿ ಗೃಹಕ್ಕೆ ಬೀಗ ಹಾಕಿ ಒಳಗಡೆ ಪಾರ್ಟಿ ಮಾಡಿದ್ದಾರೆ.
ಘಟನೆ ಕುರಿತಂತೆ ಮಾಹಿತಿ ಪಡೆದು ಮಾಧ್ಯಮ ವರದಿಗಾರರು ಸ್ಥಳಕ್ಕೆ ಹೋಗುತ್ತಿದಂತೆ ಪಾರ್ಟಿ ನಡೆಸುತ್ತಿದ್ದ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಸಂತೇಮರಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಘಟನೆ ಕುರಿತಂತೆ ಇದುವರೆಗೂ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.