ಕನ್ನಡ ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ. ಎಲ್ಲ ಮನರಂಜನಾ ವಾಹಿನಿಗಳು ಧಾರಾವಾಹಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಟಿಆರ್ಪಿಯಲ್ಲಿ ನಂ.1 ಸ್ಥಾನ ಪಡೆದುಕೊಳ್ಳಬೇಕು ಎಂದು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಅಂಥ ಸಾಧನೆ ಸಾಧ್ಯವಾಗುವುದು ಕೆಲವೇ ಸೀರಿಯಲ್ಗಳಿಗೆ ಮಾತ್ರ. ಟಿಆರ್ಪಿ ರೇಸ್ನಲ್ಲಿ ಹಲವು ವಾರಗಳ ಕಾಲ ನಂ.1 ಪಟ್ಟ ಕಾಪಾಡಿಕೊಂಡ ಸತ್ಯ ಸೀರಿಯಲ್ ಈಗ ಇನ್ನೊಂದು ಮೈಲಿಗಲ್ಲು ತಲುಪಿದೆ.
ಕಳೆದ ವರ್ಷ ಲಾಕ್ಡೌನ್ ಸಡಿಲಿಕೆ ಆದ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಸತ್ಯ ಸೀರಿಯಲ್ ಆರಂಭ ಆಗಿತ್ತು. ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸ್ವಪ್ನ ಕೃಷ್ಣ ಅವರು ಈ ಧಾರಾವಾಹಿಗೆ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ಬಗೆಯ ಕಥೆ ಮತ್ತು ನಿರೂಪಣೆ ಶೈಲಿಯಿಂದ ಗಮನ ಸೆಳೆಯುತ್ತಿರುವ ಈ ಸೀರಿಯಲ್ ಜನಮೆಚ್ಚುಗೆ ಗಳಿಸಿದೆ. ಆರಂಭದಲ್ಲಿಯೇ ನಂ.1 ಸ್ಥಾನಕ್ಕೆ ಜಿಗಿದಿದ್ದು ‘ಸತ್ಯ’ ಧಾರಾವಾಹಿಯ ಹೆಚ್ಚುಗಾರಿಕೆ. ಈಗ ಈ ಧಾರಾವಾಹಿ 100 ಎಪಿಸೋಡ್ಗಳನ್ನು ಪೂರ್ಣಗೊಳಿಸಿದ ಸಂಭ್ರಮದಲ್ಲಿದೆ.
ಸತ್ಯ ಎಂಬ ದಿಟ್ಟ ಹುಡುಗಿಯ ಕಥೆಯನ್ನು ಧಾರಾವಾಹಿ ಹೊಂದಿದೆ. ಸತ್ಯ ಪಾತ್ರದಲ್ಲಿ ನಟಿ ಗೌತಮಿ ಜಾಧವ್ ಅಭಿನಯಿಸಿದ್ದಾರೆ. ಟಾಮ್ ಬಾಯ್ ರೀತಿ ಇರುವ ಆ ಪಾತ್ರಕ್ಕೆ ಗೌತಮಿ ಜೀವ ತುಂಬಿದ್ದಾರೆ. ಅವರ ಹೇರ್ಸ್ಟೈಲ್, ಮ್ಯಾನರಿಸಂ ಮತ್ತು ಅಭಿನಯದ ಶೈಲಿಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿಕ್ಕ ಮಕ್ಕಳು ಕೂಡ ಈ ಪಾತ್ರವನ್ನು ಇಷ್ಟಪಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಬಳಿಕ ಗೌತಮಿ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ.
ಸಾಗರ್ ಬಿಳಿ ಗೌಡ, ಶ್ರೀನಿವಾಸ್ ಮೂರ್ತಿ, ಅಭಿಜಿತ್, ತ್ರಿವೇಣಿ ಮುಂತಾದವರು ಸತ್ಯ ಧಾರಾವಾಹಿಯ ಇನ್ನುಳಿದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರೀತಿ-ಪ್ರೇಮ, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಅನೇಕ ಬಗೆಯಲ್ಲಿ ಪ್ರೇಕ್ಷಕರನ್ನು ಈ ಧಾರಾವಾಹಿ ಸೆಳೆದುಕೊಳ್ಳುತ್ತಿದೆ. 100 ಸಂಚಿಕೆಗಳನ್ನು ಪೂರೈಸಿರುವುದು ಇಡೀ ತಂಡಕ್ಕೆ ಸಂಭ್ರಮ ತಂದಿದೆ. ಜೀ ಕನ್ನಡ ವಾಹಿನಿ ಈ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡುತ್ತಿದೆ.
‘ಮಹಿಳೆಯರಿಗೆ ಪ್ರೇರಕಶಕ್ತಿಯಾಗಿರುವ ಸತ್ಯ ಧಾರಾವಾಹಿ ನೂರು ಕಂತಿನ ಮೈಲಿಗಲ್ಲು ಮುಟ್ಟಿರುವುದು ಅವರ ಅಭೂತಪೂರ್ವ ಪ್ರೀತಿಗೆ ದ್ಯೋತಕವಾಗಿದೆ. ಜೀ ಕನ್ನಡ ವೀಕ್ಷಕರನ್ನು ರಂಜಿಸುವ ಮತ್ತಷ್ಟು ವಿನೂತನ ಕಾರ್ಯಕ್ರಮಗಳನ್ನು ನಾವು ನೀಡಲು ಇದು ಪ್ರೇರಣೆ ನೀಡಿದೆ’ ಎಂದು ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.