ಚಾಮರಾಜನಗರ (ಜ. 23): ನಮ್ಮಲ್ಲಿ ಯಾವ ಬಾಂಬೆ ಟೀಮೂ ಇಲ್ಲ, ಬೆಂಗಳೂರು ಟೀಮೂ ಇಲ್ಲ. ಈಗ ನಮ್ಮದೆಲ್ಲ ಯಡಿಯೂರಪ್ಪನವರ ಟೀಂ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾತನಾಡಿದ ಬಿ.ಸಿ. ಪಾಟೀಲ್, ನಮ್ಮಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ. ಬಿಜೆಪಿಯಿಂದ ತಾಳಿ ಕಟ್ಟಿಸಿಕೊಂಡು ಮದುವೆಯಾಗಿ ಶಾಸಕರಾದ ಮೇಲೆ ಯಾವ ಟೀಮೂ ಇಲ್ಲ. ನಮ್ಮಲ್ಲಿರೋದು ಒಂದೇ ಟೀಮು; ಅದು ಬಿಎಸ್ವೈ ಟೀಂ, ಬಿಜೆಪಿ ಟೀಂ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ನಂತರ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಕಾಗಿದ್ದು ಸಿಗದಿದ್ದಾಗ ಅತೃಪ್ತಿ ಸಹಜ. ಐದು ಬೆರಳು ಒಂದೇ ಸಮ ಇರುವುದಿಲ್ಲ. ಒಂದೆರೆಡು ದಿನದಲ್ಲಿ ಎಲ್ಲವೂ ಸರಿಹೋಗಲಿದೆ. ನನಗೆ ಅರಣ್ಯ ಖಾತೆ ಕೊಟ್ಟಿದ್ದರು. ಆದರೆ ನಾನೇ ಕೇಳಿಕೊಂಡು ಕೃಷಿ ಖಾತೆ ಪಡೆದೆ. ತಮಗೆ ಇಷ್ಟವಾದ ಖಾತೆ ಸಿಕ್ಕರೆ ಒಳ್ಳೆಯ ಕೆಲಸ ಮಾಡಬಹುದು ಎಂಬುದು ಕೆಲವರ ಅಭಿಪ್ರಾಯ ಇರಬಹುದು ಎಂದಿದ್ದಾರೆ.
ರೈತರು ಸ್ವಾವಲಂಬಿಗಳಾಗಿ ಆತ್ಮಾಭಿಮಾನದಿಂದ ಬದುಕುವಾಂತಾದರೆ ಅದೇ ನನಗೆ ಖುಷಿ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೆಜಾರಿಟಿ ರೈತರು ಒಪ್ಪಿಕೊಂಡಿದ್ದಾರೆ. ತಂದೆತಾಯಿಗೆ ವಯಸ್ಸಾಯಿತೆಂದು ಹೊರಗೆ ಹಾಕುತ್ತೇವಾ? ಹಾಗೇ ಗೋವುಗಳನ್ನು ಸಹ ನೋಡಿಕೊಳ್ಳಬೇಕಲ್ಲವೇ? ಅವುಗಳು ಸಗಣಿಯಿಂದ ಗೊಬ್ಬರವಾಗುವುದಿಲ್ಲವೇ? ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
Laxmi News 24×7