ಚೆನೈ, ಡಿ.23-ಕೊರೊನಾ ಸೋಂಕಿನ ಆತಂಕದ ನಡುವೆಯೂ ತಮಿಳುನಾಡು ಸರ್ಕಾರ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಷರತ್ತು ಬದ್ಧ ಅನುಮತಿ ನೀಡಿದೆ. ಕ್ರೀಡೆಯಲ್ಲಿ 150 ಮಂದಿಗಿಂತ ಹೆಚ್ಚಿನ ಜನ ಸೇರಬಾರದು, ಕ್ರೀಡೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ಸರ್ಟಿಫಿಕೆಟ್ ಹೊಂದಿರಬೇಕು ಎಂದು ಸೂಚಿಸಲಾಗಿದೆ. ಕ್ರೀಡೆಯನ್ನು ನೋಡಲು ಆಗಮಿಸುವ ಪ್ರೇಕ್ಷಕರ ಸಂಖ್ಯೆ ಶೇ.50ಕ್ಕಿಂತ ಮೀರಿರಬಾರದು ಎಂದು ತಾಕೀತು ಮಾಡಲಾಗಿದೆ.
ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಜಲ್ಲಿಕಟ್ಟು ಬೇಡ ಎಂದು ಕೆಲವರು ವಾದಿಸಿದ್ದರು. ಕ್ರೀಡೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಸಾಧ್ಯ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಜಲ್ಲಿಕಟ್ಟನ್ನು ಮುಂದೂಡುವಂತೆ ಒತ್ತಾಯಗಳು ಕೇಳಿ ಬಂದಿದ್ದವು.
ಇದಕ್ಕೆ ವ್ಯತಿರಿಕ್ತವಾಗಿ ಸಾಂಪ್ರದಾಯಿಕ ಸಾಹಸ ಕ್ರೀಡೆಯನ್ನು ನಿಲ್ಲಿಸಬಾರದು ಎಂದು ಹಲವರು ಒತ್ತಡ ಹೇರಿದ್ದರು. ಕ್ರೀಡೆ ಆಯೋಜಿಸುವ ಸಂಘಟಕರು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಮನವಿ ನೀಡಿ, ಅನುಮತಿ ನೀಡುವಂತೆ ಒತ್ತಾಯಿಸಿದ್ದರು.
ಪ್ರತಿ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಜಲ್ಲಿಕಟ್ಟು ಆಯೋಜನೆ ಮಾಡಲಾಗುತ್ತದೆ. ಅದಕ್ಕಾಗಿ ಸುಮಾರು ಒಂದು ತಿಂಗಳ ಮೊದಲೇ ಕ್ರೀಡೆಯಲ್ಲಿ ಭಾಗವಹಿಸುವ ಹೋರಿಗಳಿಗೆ ತರಬೇತಿ ನೀಡಬೇಕಿದೆ. ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದರೂ, ಎರಡನೆ ಹಂತದ ಅಲೆಯ ಆತಂಕ ಇರುವುದರಿಂದ ಜಲ್ಲಿಕಟ್ಟನ್ನು ನಡೆಸಬಾರದು ಎಂಬ ಅಭಿಪ್ರಾಯಗಳಿದ್ದವು.
ವಾದ ವಿವಾದಗಳ ನಡುವೆ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಷರತ್ತು ಬದ್ಧ ಅನುಮತಿ ನೀಡಿದೆ.
Laxmi News 24×7