ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್ ವಿರೋಧಿಸಿ ಪೋಷಕರು ನಡೆಸುತ್ತಿರುವ ಪ್ರತಿಭಟನೆಗೆ ಉತ್ತರ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪೋಷಕರ ವಿರುದ್ಧವೇ ಗೂಬೆ ಕೂರಿಸಿದ್ದಾರೆ.
ಕೊರೋನಾದಿಂದಾಗಿ ಎಲ್ಲಾ ಕ್ಷೇತ್ರಗಳು ಆಎರ್ಹಿಕವಾಗಿ ಸಂಕಷ್ಟಕ್ಕೀಡಾಗಿವೆ. ಪೋಷಕರೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಆದರೆ ಪೋಷಕರು ಆರ್ಥಿಕವಾಗಿ ಶಕ್ತಿವಂತರಾಗಿದ್ದಾಗ ಇಂತದ್ದೇ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳು ಓದಬೇಕು ಎಂದು ಹಠಕ್ಕೆ ಬಿದ್ದು, ರಾತ್ರಿಯಿಡಿ ಶಾಲೆಗಳ ಮುಂದೆ ನಿಂತು ಅರ್ಜಿ ಪಡೆದರು. ತಮ್ಮ ಮಕ್ಕಳಿಗೆ ಅದೇ ಶಾಲೆಯಲ್ಲಿ ಸೀಟ್ ಸಿಕ್ಕಾಗ ಖುಷಿ ಪಟ್ಟರು. ಆದರೆ ಈಗ ಅದೇ ಶಾಲೆಗಳ ವಿರುದ್ಧ ಪ್ರತಿಭಟನೆ ಮಾಡಿ, ಘೋಷಣೆ ಕೂಗುವ ಸ್ಥಿತಿ ಬಂದಿದೆ ಎಂದಿದ್ದಾರೆ.
ದೊಡ್ಡ ದೊಡ್ಡ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದ್ಯಾಕೆ? ಗಣ್ಯರಿಂದ ರಾತ್ರಿಯಿಡಿ ಶಾಲೆಯ ಮುಂದೆ ನಿಂತು ಅರ್ಜಿ ಪಡೆದಿದ್ಯಾಕೆ? ಎಂದು ಪ್ರಶ್ನಿಸಿರುವ ಸಚಿವರು ಆರ್ಥಿಕವಾಗಿ ಪೋಷಕರೂ ಸಂಕಷ್ಟದಲ್ಲಿದ್ದಾರೆ ಶಿಕ್ಷಣ ಸಂಸ್ಥೆಗಳೂ ಜರ್ಜರಿತವಾಗಿವೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಚರ್ಚೆ ನಡೆಸಬೇಕು. ಪರಸ್ಪರ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು ಎಂದು ಹೇಳಿದ್ದಾರೆ.