ಬೆಂಗಳೂರು: ‘ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರ ಹೊಮ್ಮುವ ತುಂತುರು ಹನಿಗಳ ಗಾತ್ರವು 5 ಮೈಕ್ರಾನ್ಗಳಿಗಿಂತ ಕಡಿಮೆ ಇದ್ದಲ್ಲಿ ವೈರಾಣು ಗಾಳಿಯಲ್ಲಿ ತೇಲಿ, ಆರು ಅಡಿಗಿಂತಲೂ ದೂರ ವ್ಯಾಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಪ್ರೆಸ್ ಇನ್ಫರ್ಮೇಷನ್ ಬ್ಯುರೊದ (ಪಿಐಬಿ) ಬೆಂಗಳೂರು ಕೇಂದ್ರವು ಗುರುವಾರ ಆಯೋಜಿಸಿದ ‘ಕೊರೊನಾ ಸೋಂಕು: ಮುನ್ನೆಚ್ಚರಿಕೆಯೇ ಚಿಕಿತ್ಸೆ’ ವೆಬಿನಾರ್ನಲ್ಲಿ ತಜ್ಞರು ಮಾತನಾಡಿದರು.
ರಾಜ್ಯ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಸುದರ್ಶನ್ ಎಂ.ಕೆ, ‘ವ್ಯಕ್ತಿಯ ಮೂಗು, ಗಂಟಲು ಮತ್ತು ಶ್ವಾಸಕೋಶದಲ್ಲಿ ಸೋಂಕು ಇರುತ್ತದೆ. ರೋಗ ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ವ್ಯಕ್ತಿಗಳಿಂದ ಕೂಡ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಈ ರೀತಿಯ ವ್ಯಕ್ತಿಗಳು ಕೆಮ್ಮಿದಾಗ ಮತ್ತು ಸೀನಿದಾಗ 5 ಮೈಕ್ರಾನ್ಗಿಂತ ಸಣ್ಣ ಕಣಗಳು ಗಾಳಿಯಲ್ಲಿ ಹರಡಿಕೊಳ್ಳಲಿವೆ. ಆರೋಗ್ಯವಂತ ವ್ಯಕ್ತಿ ಉಸಿರಾಟ ನಡೆಸುವಾಗ ಆ ಕಣಗಳು ದೇಹ ಸೇರುತ್ತವೆ. ಹಾಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಗವಸು ಧರಿಸಬೇಕು’ ಎಂದು ತಿಳಿಸಿದರು.
‘ನೆಲ, ಬಾಗಿಲು, ಟೇಬಲ್ ಸೇರಿದಂತೆ ವಿವಿಧೆಡೆ ಬಿದ್ದಿರುವ ಕಣಗಳನ್ನು ಸ್ಪರ್ಶಿಸಿ, ಕಣ್ಣು, ಮೂಗು ಹಾಗೂ ಬಾಯಿ ಮುಟ್ಟಿಕೊಂಡಲ್ಲಿ ಸಹ ಸೋಂಕಿತರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಕೈಗಳನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಿಕೊಳ್ಳಬೇಕು’ ಎಂದು ಸೂಚಿಸಿದರು.
ಲಕ್ಷಣಗಳಲ್ಲಿ ವ್ಯತ್ಯಾಸ: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಯ (ಬಿಎಂಸಿಆರ್ಐ) ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯದ ಡಾ. ಸತ್ಯನಾರಾಯಣ ಎಂ.ಎಸ್, ‘ಕೋವಿಡ್ ದೊಡ್ಡ ಕುಟುಂಬವಾ
ಗಿದ್ದು, ಇದಕ್ಕೆ ಎಲ್ಲ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಶೀತ, ಜ್ವರ, ಕೆಮ್ಮಿನ ಜತೆಗೆ ತಲೆನೋವು, ಭೇದಿ ಸೇರಿದಂತೆ ವಿವಿಧ ಲಕ್ಷಣಗಳು ಸೋಂಕಿತರಿಗೆ ಕಾಣಿಸಿಕೊಳ್ಳುತ್ತದೆ’ ಎಂದರು.
‘ರೋಗಿಯ ಮಲ, ಮೂತ್ರದಲ್ಲಿಯೂ ಸೋಂಕು ಇರುತ್ತದೆ. ಕಣ್ಣೀರಿನಲ್ಲಿಯೂ ಸೋಂಕು ಇರುವುದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ’ ಎಂದು ತಿಳಿಸಿದರು.