ಮೈಸೂರು: ಸಿದ್ದರಾಮಯ್ಯ ಅವರೇ ಖುದ್ದಾಗಿ ಸಿಎಂ ಅವರೇ ದಾಖಲೆ ಕೊಡ್ತಿದ್ದಾರೆ ಹೋಗಿ ಪರಿಶೀಲಿಸಿ. ಖುದ್ದಾಗಿ ಸ್ವತಃ ಸಿಎಂ ದಾಖಲೆ ಕೊಡುವುದಕ್ಕಿಂತ ಒಳ್ಳೆಯ ಅವಕಾಶ ಇದ್ಯಾ?. ಈ ಅವಕಾಶ ಬಳಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೊರೊನಾ ಚಿಕಿತ್ಸೆ ವಿಚಾರದಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ಮಾಡಿದೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ಬಾರಿ ನಿಮ್ಮನ್ನ ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರು ತರಬೇಡಿ. ನಮ್ಮನ್ನ ಕೇಳಿ ನಾವು ಉತ್ತರಿಸುತ್ತೇವೆ ಎಂದು ಪಿಎಂ ಕೇರ್ಸ್ ಲೆಕ್ಕ ಕೊಡಿ ಅಂತ ಕೇಳಿದ್ದ ಸಿದ್ದರಾಮಯ್ಯಗೆ ಪ್ರತಾಪ್ಸಿಂಹ ತಿರುಗೇಟು ನೀಡಿದರು.
ಕೋವಿಡ್ ನಿಯಂತ್ರಣದಲ್ಲಿ ಅಕ್ರಮ ಆಗಿದೆ ಅಂತ ಹೇಳುತ್ತೀರಿ. ಆದರೆ ದಾಖಲೆ ಪರಿಶೀಲನೆ ವಿಧಾನಸೌಧಕ್ಕೆ ಬನ್ನಿ ಅಂದ್ರೆ ಬರೋಲ್ಲ. ಆದ್ರೆ ಪಿಎಂ ಕೇರ್ಸ್ ಲೆಕ್ಕವನ್ನ ಮಾತ್ರ ನೀವು ಕೇಳ್ತೀರಾ. ಇದು ಹೇಗೆ ಆಗುತ್ತೆ ಸಿದ್ದರಾಮಯ್ಯನವರೇ. ನನಗೆ ಅದಕ್ಕಿಂತ ಖುಷಿಯಾಗಿದ್ದು ನಮ್ಮ ಸಂತೋಷ್ ಅವರ ಭಾಷಣವನ್ನ ನೀವು ಕೇಳಿದ್ದು. ಅವರು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ರೀತಿಯಲ್ಲಿ ನಮ್ಮ ರಾಜ್ಯದ ವಿರೋಧ ಪಕ್ಷಗಳಿಂದ ನಿರೀಕ್ಷೆ ಮಾಡಿದ್ದಾರೆ. ಅದನ್ನ ಸಕಾರಾತ್ಮಕವಾಗಿ ತೆಗೆದುಕೊಳ್ಳದೆ ಅದ್ಯಾಕೆ ಮೋದಿ ಫಿಎಂ ಕೇರ್ಸ್ ಫಂಡ್ ಮಧ್ಯ ತರುತ್ತೀರಿ. ನಿಮ್ಮ ಮಟ್ಟವನ್ನ ಪ್ರತಿಬಾರಿ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ರಾಜ್ಯದಲ್ಲಿರುವ ನಮ್ಮನ್ನ ಕೇಳಿ ನಾವೇ ಉತ್ತರ ಕೋಡ್ತಿವಿ ಎಂದು ವಾಗ್ದಾಳಿ ನಡೆಸಿದರು.
ಪಾಲಿಕೆ ಸದಸ್ಯರಿಗೆ ಸವಾಲು:
ಮೈಸೂರು ಸಂಸದ ಹಾಗೂ ಪಾಲಿಕೆ ಸದಸ್ಯರ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಸದಸ್ಯರಿಗೆ ಸಂಸದ ಪ್ರತಾಪ್ಸಿಂಹ ಸವಾಲು ಎಸೆದಿದ್ದಾರೆ. ನೀವು ಕಟ್ಟಿಸಿರುವ ನಿಮ್ಮ ಮನೆ ಹಾಗೂ ವಾಣಿಜ್ಯ ಸಂರ್ಕಿಣ ಪಾಲಿಕೆ ನಿಯಮದ ಅಡಿಯಲ್ಲಿ ಇದ್ಯಾ? ಅದನ್ನ ಮೊದಲು ಜನರ ಮುಂದೆ ಇಡಿ. ಪಾಲಿಕೆಯ ನಿಯಮ ಉಲ್ಲಂಘಿಸದೆ ಸಿಆರ್ ಸರ್ಟಿಫಿಕೇಟ್ ಪಡೆದು ಯಾರು ಕಟ್ಟಡ ಕಟ್ಟಿದ್ದೀರಾ ತೋರಿಸಿ. ಈ ಸವಾಲು 15 ವರ್ಷದಿಂದ ಪಾಲಿಕೆ ಸದಸ್ಯರಾಗಿರುವ ಹಾಗೂ ಮೇಯರ್ಗಳಾಗಿರುವ ಎಲ್ಲರಿಗೂ ಆಗಿದೆ ಎಂದು ತನ್ನದೆ ಕ್ಷೇತ್ರದ ಪಾಲಿಕೆ ಸದಸ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.