ರಬಕವಿ ಬನಹಟ್ಟಿ: ಬನಹಟ್ಟಿಯಿಂದ ಜಗದಾಳ, ನಾವಲಗಿ, ಕುಳಲಿ ಮಾರ್ಗವಾಗಿ ಮುಧೋಳ ನಗರಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಪ್ರಯಾಣಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ತರಕಾರಿ ಮಾರಲು ಬರುವ ಜನರಿಗೆ ತೊಂದರೆಯಾಗಿದೆ.
ಬಹಳಷ್ಟು ಗುಂಡಿಗಳು ನಿರ್ಮಾಣವಾದ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಕೆಂಪು ಬಟ್ಟೆಯನ್ನು ಸುತ್ತಿದ ಧ್ವಜಗಳನ್ನು ನಿಲ್ಲಿಸುತ್ತಿದ್ದಾರೆ.
ಅದರಲ್ಲೂ ಜಗದಾಳದಿಂದ ಕುಳಲಿ ಗ್ರಾಮದ ಮಧ್ಯದ ರಸ್ತೆ ಹೆಚ್ಚು ಕೆಟ್ಟಿದೆ. ರಸ್ತೆಯಲ್ಲಿ ಅಪಾರ ಪ್ರಮಾಣದ ತಗ್ಗುಗಳು ನಿರ್ಮಾಣವಾಗಿವೆ. ರಾತ್ರಿ ಸಮಯದಲ್ಲಿ ಈ ರಸ್ತೆಯ ಮೂಲಕ ಸಂಚಾರ ಮಾಡುವುದು ಅಪಾಯಕರವಾಗಿದೆ.
ಈ ರಸ್ತೆ ಬನಹಟ್ಟಿ ಹಾಗೂ ಮುಧೋಳದ ಮೂಲಕ ಬೇರೆ ಬೇರೆ ನಗರಗಳಿಗೆ ಹೋಗುವ ಮಾರ್ಗವಾಗಿದೆ. ನಿತ್ಯ ಇದೇ ಮಾರ್ಗವಾಗಿ ನೂರಾರು ವಿದ್ಯಾರ್ಥಿಗಳು ಮುಧೋಳ ಮತ್ತು ಬನಹಟ್ಟಿಗೆ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.
ಇದೇ ಮಾರ್ಗದ ತೋಟದ ಜನರು ಮುಧೋಳ ಮತ್ತು ರಬಕವಿ ಬನಹಟ್ಟಿ ನಗರಗಳಿಗೆ ತರಕಾರಿ, ಹಾಲು ಮತ್ತು ಮೊಸರು ಮಾರಾಟ ಮಾಡಲು ಬರುತ್ತಾರೆ. ಅವರಿಗೂ ರಸ್ತೆ ಹದಗೆಟ್ಟಿದ್ದರಿಂದ ಸಮಸ್ಯೆಯಾಗಿದೆ. ಒಟ್ಟು 27 ಕಿ.ಮೀ. ದೂರ ಕ್ರಮಿಸಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ಹಿಡಿಯುತ್ತಿದೆ. ಈ ರಸ್ತೆಯಲ್ಲಿ 20ಕ್ಕೂ ಹೆಚ್ಚು ಅವೈಜ್ಞಾನಿಕ ರಸ್ತೆ ತಡೆಗಳನ್ನು ಅಳವಡಿಸಿರುವುದರಿಂದ ಜನರಿಗೆ ಮತ್ತಷ್ಟು ತೊಂದರೆಯಾಗಿದೆ.
Laxmi News 24×7