ವಿಜಯಪುರ: ಹಬ್ಬ-ಹರಿದಿನಗಳು ಸೇರಿ ಇತರ ದಿನಗಳಲ್ಲೂ ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಗೌರವಿಸುವ, ಪ್ರೀತಿಸುವ ಹಾಗೂ ಉಳಿಸಿ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಮ್ಮ ಹಿಂದೂ ಧರ್ಮ ನಮ್ಮ ದೇಶದ ಒಂದು ಜೀವನದ ಪದ್ದತಿ, ಸಂಸ್ಕೃತಿಯಾಗಿದೆ.
ದೇಶದ ಸುರಕ್ಷತೆ, ಅಭಿವೃದ್ಧಿ ಜತೆಗೆ ಧರ್ಮದ ಉಳಿವಿಗಾಗಿ, ನಮ್ಮ ಧರ್ಮವನ್ನು ಗೌರವಿಸುವ, ದೇಶಾಭಿಮಾನ ಹೊಂದಿರುವ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು, ದೊಡ್ಡ ವ್ಯಾಪಾರಸ್ಥರ ಹತ್ತಿರ ದಿನಸಿ, ಬಟ್ಟೆ, ಹಣ್ಣು, ತರಕಾರಿ ಯಾವುದೇ ಸಾಮಾಗ್ರಿಗಳನ್ನು ಖರೀದಿಸಬೇಕು. ಇದರಿಂದ ನಮ್ಮ ಧರ್ಮಕ್ಕೆ ಗೌರವ ಮತ್ತು ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಆದರೆ, ಧರ್ಮ ವಿರೋಧಿ, ದೇಶ ವಿರೋಧಿಗಳ ಹತ್ತಿರ ವ್ಯವಹಾರ ಮಾಡಿದರೆ, ನಮ್ಮ ಧರ್ಮಾಚರಣೆಗೆ ಬಳಸುವ ಶುದ್ಧ ವಸ್ತುಗಳು ಸಿಗದೇ, ಅಶುದ್ಧತೆಯ ವಸ್ತುಗಳನ್ನು ಆಚರಣೆಗೆ ಬಳಸಿದಂತಾಗಿ, ನಮ್ಮ ಆಚರಣೆಗಳ ಪವಿತ್ರತೆಯು ಹಾಳಾಗಿ, ಪರಿಶುದ್ಧತೆಯಿಂದ ವಂಚಿತರಾಗುತ್ತೇವೆ ಎಂದಿದ್ದಾರೆ.