ಬೆಳಗಾವಿ: ಇಲ್ಲಿನ ಅಂಜುಮನ್ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪರೀಕ್ಷೆಯಲ್ಲಿ, ಒಎಂಆರ್ ಶೀಟ್ ನೀಡಲು 15 ನಿಮಿಷ ವಿಳಂಬವಾಗಿದೆ. ಇದರಿಂದ ಸಿಟ್ಟಿಗೆದ್ದ ಅಭ್ಯರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 10ಕ್ಕೆ ಸರಿಯಾಗಿ ಪರೀಕ್ಷೆ ಆರಂಭವಾಗಬೇಕಿತ್ತು. ತಡವಾದರೂ ಒಎಂಆರ್ ಸೀಟ್ ನೀಡಲಿಲ್ಲ. ಆಕ್ರೋಶಗೊಂಡ ಅಭ್ಯರ್ಥಿಗಳು ಕೊಠಡಿಯಿಂದ ಹೊರಬಂದು ಘೋಷಣೆ ಕೂಗತೊಡಗಿದರು. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
‘ಒಎಂಆರ್ ಶೀಟ್ನ ಬಂಡಲುಗಳು ಬೇರೆಬೇರೆ ಕೊಠಡಿಗಳಿಗೆ ಹೋಗಿದ್ದರಿಂದ ಗೊಂದಲವಾಗಿದೆ’ ಎಂದು ಪರೀಕ್ಷಾ ಸಿಬ್ಬಂದಿ ತಿಳಿಸಿದರು. ಆದರೆ, ಇದಕ್ಕೆ ಒಪ್ಪದ ಅಭ್ಯರ್ಥಿಗಳು, ‘ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಶಂಕೆ ಇದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು’ ಎಂದು ಪಟ್ಟು ಹಿಡಿದರು. ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಥಳಕ್ಕೆ ಬಂದು, ಪರಿಸ್ಥಿತಿ ನಿಭಾಯಿಸಿದರು.
‘ಒಎಂಆರ್ ಶೀಟ್ಗಳು ಅದಲು- ಬದಲು ಆಗಿದ್ದರಿಂದ ನಾಲ್ಕು ಕೊಠಡಿಗಳಲ್ಲಿ ವಿಳಂಬವಾಗಿ ನೀಡಲಾಗಿದೆ. ತಡವಾಗಿ ನೀಡಿದವರಿಗೆ ಹೆಚ್ಚುವರಿ ಸಮಯ ನೀಡಿರುವ ಬಗ್ಗೆ ಕೆಪಿಎಸ್ಸಿಗೆ ಪತ್ರ ಬರೆಯುವೆ. ಎಲ್ಲಿಯೂ ಪ್ರಶ್ನೆ ಪತ್ರಿಕೆ ಬಹಿರಂಗವಾಗಿಲ್ಲ. ಹೆಚ್ಚುವರಿ ಸಮಯ ನೀಡುವ ಭರವಸೆ ನೀಡಿದ ಬಳಿಕ ಎಲ್ಲರೂ ಶಾಂತ ರೀತಿಯಿಂದ ಪರೀಕ್ಷೆ ಬರೆದರು. ಮಧ್ಯಾಹ್ನದ ಪರೀಕ್ಷೆ ಸುಗಮವಾಗಿ ನಡೆಯಿತು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
Laxmi News 24×7