ಮೂಡಲಗಿ : ‘ತಾಲ್ಲೂಕಿನ ನಾಗನೂರ ಗ್ರಾಮದ ಅರಣ್ಯಸಿದ್ದೇಶ್ವರ ತೋಟದ ಸಿದ್ದಪ್ಪ ಜಾವಲಿ ಎಂಬುವವರ ಗದ್ದೆಯಲ್ಲಿ ಮಂಗಳವಾರ ಮಧ್ಯಾಹ್ನ ಚಿರತೆ ಪ್ರತ್ಯಕ್ಷವಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆದ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿ ಸಂಜು ಸವಸುದ್ದಿ ಪರಿಶೀಲನೆ ನಡೆಸಿ ಅದು ಚಿರತೆ ಅಲ್ಲ ಕಾಡು ಬೆಕ್ಕು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಹಾದೇವ ಸನ್ನಮುರಿ, ಸಾರ್ವಜನಿಕರ ಹಿತ ದೃಷ್ಟಿಯಿಂದ ರಾತ್ರಿ ವೇಳೆ ಒಬ್ಬೊಬ್ಬರಾಗಿ ತಿರುಗಾಡದಂತೆ ಹಾಗೂ ಮಕ್ಕಳು, ಜಾನುವಾರುಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪಟ್ಟಣದಲ್ಲಿ ಡಂಗುರ ಸಾರಿಸಿದ್ದಾರೆ.
ಶಾಲೆಗೆ ರಜೆ: ಚಿರತೆ ಓಡಾಡಿದ ಸಂಶಯ ಇರುವ ಸ್ಥಳದ ಪಕ್ಕದಲ್ಲಿ ಅರಣ್ಯಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಮಕ್ಕಳ ಹಿತದೃಷ್ಟಿಯಿಂದ ಜುಲೈ 24ರಂದು ಒಂದು ದಿನ ಶಾಲೆಗೆ ರಜೆ ನೀಡಲು ತಹಶೀಲ್ದಾರ್ ಮಹಾದೇವ ಸನ್ನಮುರಿ ನಿರ್ದೇಶಿಸಿದಂತೆ ಬಿಇಒ ಅಜಿತ್ ಮನ್ನಿಕೇರಿ ಅವರು ಆ ಶಾಲೆಗೆ ಒಂದು ದಿನ ರಜೆ ಘೋಷಿಸಿದ್ದಾರೆ.