ಮೈಸೂರು, ಜೂನ್ 28: ಸಾಂಸ್ಕೃತಿಕ ನಗರಿ ಮೈಸೂರು (Mysore) ಅರಮನೆಗೆ (Mysore Palace) ಹೆಸರುವಾಸಿ. ವಿಶ್ವವಿಖ್ಯಾತ ಮೈಸೂರು ಅರಮನೆಗೆ ಪಾರಿವಾಳಗಳ (Pigeon) ಹಿಕ್ಕೆಯಿಂದ ಕಂಟಕ ಎದುರಾಗಿದೆ. ಪಾರಿವಾಳಗಳು ಹಾಕುವ ಹಿಕ್ಕೆಯಲ್ಲಿ, ಯೂರಿಕ್ ಆ್ಯಸಿಡ್ (Uric Acid) ಇರುತ್ತದೆ. ಯೂರಿಕ್ ಆಸ್ಯಡಿನಿಂದ ಕೂಡಿರುವ ಈ ಹಿಕ್ಕೆಗಳು ಪಾರಂಪರಿಕ ಕಟ್ಟಡಗಳ ಮೇಲೆ ಬೀಳುವುದರಿಂದ, ಕಟ್ಟಡಗಳು ವಿರೂಪಗೊಳ್ಳುತ್ತವೆ ಎಂದು ಇತಿಹಾಸ ತಜ್ಞ ಪ್ರೋ. ರಂಗರಾಜು ಹೇಳಿದ್ದಾರೆ.
ಪ್ರೋ. ರಂಗರಾಜು, ಈ ಹಿಕ್ಕೆಗಳನ್ನು ತಾಮ್ರ ಅಥವಾ ಸ್ಟೀಲ್ ಪಾತ್ರೆಯಲ್ಲಿ ಹಾಕಿ ಕೆಲವು ದಿನಗಳು ಬಿಟ್ಟರೆ, ರಂಧ್ರ ಬೀಳುತ್ತದೆ. ಮೈಸೂರಿನ ಹತ್ತನೇ ಚಾಮರಾಜ ವೃತ್ತ ಮತ್ತು ನಾಲ್ವಡಿ ಕೃಷ್ಣರಾಜ ವೃತ್ತಗಳನ್ನು ಮಾರ್ಬಲ್ ಕಲ್ಲಿನಿಂದ ಮಾಡಲಾಗಿದೆ. ಈ ವೃತ್ತದಲ್ಲಿ ಪಾರಿವಾಳಗಳು ಹಿಕ್ಕೆ ಹಾಕುವುದರಿಂದ ಮಾರ್ಬಲ್ಗೆ ಹಾನಿಯಾಗಲಿದೆ. ಈ ಹಿಕ್ಕೆಗಳಿಂದ ಅರಮನೆಗೆ ಬಹಳ ಮಾರಕವಾಗಲಿದೆ ಎಂದರು.
ಹೀಗಾಗಿ, ಅರಮನೆ, ಈ ವೃತ್ತಗಳ ಬಳಿ ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಡೆಯಬೇಕು. ಈ ಬಗ್ಗೆ ಅನೇಕರು ಧ್ವನಿ ಎತ್ತಿದ್ದಾರೆ. ಈ ಪಾರಿವಾಳಗಳು ಅರಮನೆ, ರಾಜರ ವೃತ್ತಗಳಿಂದ ದೂರ ಹೋಗುವಂತೆ ಮಾಡಬೇಕು. ಪಾರಿವಾಳಗಳು ದೂರ ಹೋಗಬೇಕೆಂದರೆ ಕಾಳುಗಳನ್ನು ಹಾಕುವುದು ನಿಲ್ಲಿಸಬೇಕು. ಕೆಲವರೊಂತು ಪಾರಿವಾಳಗಳಿಗೆ ಹಾಕುವ ಕಾಳುನ್ನು ಅರಮನೆ ಅಕ್ಕ-ಪಕ್ಕ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದನ್ನೂ ತಡೆಯಬೇಕು. ಅರಮನೆ ಸೇರಿ ಪಾರಂಪರಿಕ ಕಟ್ಟಡದ ರಕ್ಷಣೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು