ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಡಿಕ್ಕಿ ಸಂಭವಿಸಿ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ನಡೆದಿದೆ.
ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾರ್ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಬಳ್ಳಾರಿ ಮೂಲದವರು ಎಂದು ಹೇಳಲಾಗುತ್ತಿದ್ದು, ಮಲೆ ಮಾದೇಶ್ವರನ ದರ್ಶನಕ್ಕೆ ಹೋಗಿ ಮೈಸೂರು ನಗರದತ್ತ ಆಗಮಿಸುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಪೊಲೀಸರ ಪರಿಶೀಲನೆ ಸಂಪೂರ್ಣ ಮುಗಿದ ಬಳಿಕವೇ ಸಂಪೂರ್ಣ ಮಾಹಿತಿ ಸಿಗಲಿದೆ.
ಮೃತಪಟ್ಟವರ ಹೆಸರನ್ನು ಪೊಲೀಸರು ಕಲೆ ಹಾಕುತ್ತಿದ್ದು, ವೈದ್ಯರು, ಸಂಬಂಧಿಕರಿಂದ ಮಾಹಿತಿ ಪಡೆದು ಬಹಿರಂಗ ಪಡಿಸುವ ಸಾಧ್ಯತೆ ಇದೆ.
ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು- ಕುರುಬೂರು ಶಾಂತಕುಮಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಯ ಪಕ್ಕದಲ್ಲಿ ಜಂಗಲ್ ಕಟ್ಟಿಂಗ್ ಮಾಡದಿರುವುದರಿಂದ ಎದುರು ಬರುವ ವಾಹನಗಳಿಗೆ ಕಾಣುವುದಿಲ್ಲ, ಆದ್ದರಿಂದ ಇಂತಹ ಭೀಕರ ಅಪಘಾತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಇದರ ಹೊಣೆ ಹೊರಬೇಕಾಗುತ್ತದೆ ಅಪಘಾತದಲ್ಲಿ ಮಡಿದ ಎಲ್ಲ ಕುಟುಂಬಕ್ಕೆ ಸರ್ಕಾರ ತಕ್ಷಣವೇ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಎಂದು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದಾರೆ.
ನಿನ್ನೆಯಷ್ಟೇ ರಾಜ್ಯಾದ್ಯಂತ ನಡೆದ ವಿವಿಧ ಅಪಘಾತ ಪ್ರಕರಣಗಳಲ್ಲಿ 17 ಜನರು ಪ್ರಾಣ ಕಳೆದುಕೊಂಡಿದ್ದರು. ಇಂದೂ ಕೂಡಾ ಮೈಸೂರು ಬಳಿ ಭೀಕರ ಅಪಘಾತ ಸಂಭಿಸಿದ್ದು, ಆರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವವಿದೆ.
ಅಪಘಾತದಲ್ಲಿ 6 ಜನ ಸಾವು: ನಿನ್ನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಲಾರಿ ಮತ್ತು ಇಂಡಿಕಾ ಕಾರು ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಾರಿನ ಟೈಯರ್ ಸ್ಫೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿತ್ತು ಎಂದು ತಿಳಿದು ಬಂದಿತ್ತು. ರಾಜಪ್ಪ ಬನಗೋಡಿ (40), ರಾಘವೇಂದ್ರ ಕಾಂಬಳೆ (24), ಅಕ್ಷಯ ಶಿವಶರಣ (21), ಜಯಶ್ರೀ (26), ಮಕ್ಕಳಾದ ರಾಕಿ (4) ಹಾಗೂ ರಕ್ಷಿತಾ (2) ಮೃತರು ಎಂದು ಗುರುತಿಸಲಾಗಿತ್ತು.
Laxmi News 24×7