ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ ಶಾಲಾ ಶಿಕ್ಷಕರು (1-5ನೇ ತರಗತಿ) ಮತ್ತು ಪದವೀಧರ ಶಾಲಾ ಶಿಕ್ಷಕರು (6-8ನೇ ತರಗತಿ) ವೃಂದದಿಂದ ಅನುಕ್ರಮವಾಗಿ 2:1 ಅನುಪಾತದಲ್ಲಿ ಮುಂಬಡ್ತಿ ನೀಡುವ ಮೂಲಕ ಪ್ರತಿ ಮೂರನೇ ರಿಕ್ತ ಸ್ಥಾನವನ್ನು ತುಂಬುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಸೂಚನೆಯಲ್ಲಿ ನಿರ್ದೇಶಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹ ಶಿಕ್ಷಕರಿಗೆ ಗ್ರೇಡ್-॥ ವೃಂದಗಳಿಗೆ ಮುಂಬಡ್ತಿ ಹೊಂದಲು ಅವಕಾಶವಿದೆ. ಬಡ್ತಿಗೆ ಅರ್ಹರಿರುವ ಈ ಎರಡೂ ವೃಂದಗಳ ಶಿಕ್ಷಕರಿಂದ ಬಡ್ತಿಗೂ ಮುನ್ನ ಅಭಿಮತವನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಆದರೆ, 1-5ನೇ ತರಗತಿಗಳಿಗೆ ಬೋಧಿಸುವ ಶಿಕ್ಷಕರು ಎನ್ಸಿಟಿಇ ಮಾರ್ಗಸೂಚಿಯನ್ವಯ ನಿರ್ದಿಷ್ಟಪಡಿಸಿದಂತೆ ಮತ್ತು ಪದವೀಧರ ಶಿಕ್ಷಕರ ಹುದ್ದೆಯ ವೃಂದ ನೇಮಕಾತಿ ನಿಯಮಗಳನ್ವಯ ಅಗತ್ಯ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದಲ್ಲಿ 6 ಮತ್ತು 7ನೇ ತರಗತಿಗೆ ಬೋಧಿಸಲು ಅರ್ಹರಾಗತಕ್ಕದ್ದು ಎಂದು ಷರತ್ತು ವಿಧಿಸಲಾಗಿದೆ.
ಬಡ್ತಿಗಾಗಿ ಸದರಿ ವೃಂದದಲ್ಲಿ 12 ವರ್ಷಗಳಿಗೆ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಿರಬೇಕು. ಒಂದು ವೇಳೆ ಆಯಾ ವೃಂದದಲ್ಲಿ ಅರ್ಹ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ ಬೇರೊಂದು ವೃಂದದ ಅಭ್ಯರ್ಥಿಗಳನ್ನು ಪರಿಗಣಿಸಲು ನಿಯಮಾವಳಿಗಳಲ್ಲಿ ಅವಕಾಶ ನೀಡಲಾಗಿದೆ.
Laxmi News 24×7