ಬೆಳಗಾವಿ: “ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದು ಹೋದ ಅಧ್ಯಾಯ” ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಡಿದ್ದು ನಿಜ. ಆದರೆ ನನ್ನ ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ ಹಿನ್ನೆಲೆ ರಾಜೀನಾಮೆ ವಿಚಾರ ಕೈಬಿಟ್ಟಿದ್ದೇನೆ” ಎಂದರು.
ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ವಿಚಾರಕ್ಕೆ ಉತ್ತರಿಸಿದ ಅವರು, ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ.ನಾನು ಬೆಂಗಳೂರು, ಮುಂಬೈ ಹೋಗಿದೆ. ಸುದ್ದಿಗೋಷ್ಠಿ ಮಾಡುವ ಸಂದರ್ಭ ಬಂದಿಲ್ಲ.ಬಾಲಚಂದ್ರ ಜಾರಕಿಹೊಳಿ ಜತೆಗೆ ಈ ಬಗ್ಗೆ ಮಾತನಾಡುತ್ತೇನೆ. ನಾನು ಒಂಟಿ ಆಗುವ ಪ್ರಶ್ನೆಯೇ ಇಲ್ಲ.ನಾನು ಮಿತ್ರ ಮಂಡಳಿ ಸದಸ್ಯರನ್ನು ಭೇಟಿಯಾಗಿಲ್ಲ ಎಂದು ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ-ಸುಮಲತಾ ಟಾಕ್ ವಾರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ:
ಕೆಆರ್ ಎಸ್ ಬಿರುಕಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸಮಲತಾ ಅಂಬರೀಶ್ ನಡುವೆ ಟಾಕ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರು ಏನ್ ಮಾತನಾಡಿದ್ದಾರೆ ಎಂಬುದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ನೀರಾವರಿ ನಿಗಮದ ಅಧಿಕಾರಿಗಳು ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹೇಳುವುದೇ ಫೈನಲ್. ಸುಮಲತಾ ಅವರು ಯಾಕೆ ಹೀಗೆ ಹೇಳಿದರು ಅಂತ ನನಗೆ ಗೊತ್ತಿಲ್ಲ” ಎಂದು ಹೇಳಿದರು.