ಬೆಂಗಳೂರು : ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂ ಮಂಜೂರಿಗೆ ಸರಕಾರಿ ಜಮೀನು ಇಲ್ಲದಿದ್ದರೆ, ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹಣ ನೀಡಿ ಖಾಸಗಿ ಜಮೀನು ಖರೀದಿಗೆ ಸರಕಾರ ಸಿದ್ದ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಪ್ರಭು ಚೌವ್ಹಾಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, 70 ವರ್ಷಗಳಿಂದ ಎಲ್ಲ ಸರಕಾರಗಳು ಇರುವ ಭೂಮಿಯನ್ನೆಲ್ಲಾ ರೈತರಿಗೆ ಹಾಗೂ ವಿವಿಧ ಜನಪರ ಯೋಜನೆಗಳಿಗೆ ಮಂಜೂರು ಮಾಡಿದ್ದು, ಪ್ರಸ್ತುತ ಸ್ಮಶಾನಕ್ಕೂ ಭೂಮಿ ಇಲ್ಲದಂತಾಗಿದೆ ಎಂದು ಬೇಸರ ಹೊರಹಾಕಿದರು.
ಕಳೆದ ಹತ್ತು ವರ್ಷಗಳಿಂದ ಎಲ್ಲ ಸರಕಾರಗಳೂ ವಸತಿ ಪ್ರದೇಶಗಳಿಗೆ ಅವಶ್ಯ ಇರುವಷ್ಟು ಸ್ಮಶಾನ ಭೂಮಿ ನೀಡಬೇಕು ಎಂದು ಪ್ರಯತ್ನಿಸಿದೆ. ಈ ವಿಚಾರದಲ್ಲಿ ಹೈಕೋರ್ಟ್ ಸಹ ಸರಕಾರದ ಬೆನ್ನುಹತ್ತಿದೆ. ಸರಕಾರಿ ಜಮೀನು ಇದ್ದಲ್ಲಿ ಆ ಭೂಮಿಯನ್ನೆ ಸ್ಮಶಾನಕ್ಕೆ ಕಾಯ್ದಿರಿಸಲಾಗಿದೆ. ಸರಕಾರಿ ಜಮೀನು ಇಲ್ಲದಿದ್ದ ಭಾಗಗಳಲ್ಲಿ ಸ್ಮಶಾನ ಭೂಮಿ ನೀಡುವ ಸಲುವಾಗಿ ಕಳೆದ 3 ವರ್ಷದಲ್ಲಿ 58 ಕೋಟಿ ರೂ. ಕೊಟ್ಟು ಭೂಮಿಯನ್ನು ಖರೀದಿ ಮಾಡುವ ಹಂತಕ್ಕೆ ಬಂದು ನಿಂತಿದ್ದೇವೆ ಎಂದು ವಿಷಾದಿಸಿದರು.
ಔರಾದ್ ತಾಲೂಕಿನ ಪರಿಸ್ಥಿತಿ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡಿದ ಅವರು, ಔರಾದ್ ತಾಲೂಕಿನ 154 ವಸತಿ ಪ್ರದೇಶಗಳ ಪೈಕಿ 9 ಪ್ರದೇಶಗಳಲ್ಲಿ ಸ್ಮಶಾನ ಇಲ್ಲ ಎಂಬ ವರದಿ ಇದೆ. ಈ 9 ಗ್ರಾಮಗಳ ಪೈಕಿ 2 ಗ್ರಾಮಗಳಿಗೆ ಆ ಗ್ರಾಮದ ಮಿತಿಯಲ್ಲೇ ಸರಕಾರಿ ಭೂಮಿ ಲಭ್ಯ ಇದ್ದು, ಇನ್ನೂ ಒಂದು ವಾರದಲ್ಲಿ ಸ್ಮಶಾನ ಭೂಮಿಗೆ ಕಾಯ್ದಿರಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
Laxmi News 24×7