ಮುಂಬೈ: ಅತ್ಯಾಚಾರ ಆರೋಪಿ ಹಾಗೂ ಖ್ಯಾತ ಜ್ಯೋತಿಷಿ ಅಶೋಕ್ ಖಾರಟ್ ಜತೆಗಿನ ಫೋಟೋಗಳು ಬಹಿರಂಗವಾದ ಹಿನ್ನೆಲೆಯಲ್ಲಿ, ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ವಿವಾದದ ಬೆನ್ನಲ್ಲೇ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅತ್ಯಾಚಾರ ಆರೋಪಿ ಹಾಗೂ ಖ್ಯಾತ ಜ್ಯೋತಿಷಿ ಅಶೋಕ್ ಖಾರಟ್ ಜತೆಗಿನ ಸಂಪರ್ಕದ ವಿವಾದದ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವ್ಯಾಪಾರಿ ಹಡಗಿನ ನಿವೃತ್ತ ನೌಕಾ ಅಧಿಕಾರಿಯಾಗಿ ‘ಕ್ಯಾಪ್ಟನ್’ ಎಂದೇ ಜನಪ್ರಿಯನಾಗಿದ್ದ ಅಶೋಕ್ ಖಾರಟ್, ತಾನು ದೈವಿಕ ಶಕ್ತಿ ಹೊಂದಿರುವ ಜ್ಯೋತಿಷಿ ಎಂದು ಬಿಂಬಿಸಿಕೊಂಡಿದ್ದ. ನಾಸಿಕ್ ಜಿಲ್ಲೆಯ ಶ್ರೀ ಈಶಾನೇಶ್ವರ ಮಹಾದೇವ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಹುದ್ದೆಯನ್ನೂ ಹೊಂದಿದ್ದ ಈತ, ಕಳೆದ ಮೂರು ವರ್ಷಗಳಿಂದ 35 ವರ್ಷದ ಮಹಿಳೆಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಲ್ಲಿ ಬುಧವಾರ ನಾಸಿಕ್ನಲ್ಲಿ ಬಂಧನಕ್ಕೊಳಗಾಗಿದ್ದಾನೆ.
ಪೊಲೀಸರ ತನಿಖೆ ವೇಳೆ ಆತನಿಂದ ವಶಪಡಿಸಿಕೊಂಡ ಪೆನ್ಡ್ರೈವ್ನಲ್ಲಿ ಆಕ್ಷೇಪಾರ್ಹ ತುಣುಕುಗಳು ಸೇರಿದಂತೆ 58 ವಿಡಿಯೋಗಳು ಪತ್ತೆಯಾಗಿವೆ. ಆರೋಪಿ ಅಶೋಕ್ ಖಾರಟ್ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಧಿವಿಧಾನಗಳ ನೆಪದಲ್ಲಿ ಮಹಿಳೆಯರನ್ನು ಶೋಷಿಸುತ್ತಿದ್ದ. ನಂತರ, ತನಗೆ ಪ್ರಬಲ ವ್ಯಕ್ತಿಗಳ ಸಂಪರ್ಕವಿದೆ ಎಂದು ಬೆದರಿಸಿ ಕೃತ್ಯಗಳನ್ನು ಬಹಿರಂಗಪಡಿಸದಂತೆ ಎಚ್ಚರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಣಕರ್, ಖಾರಟ್ ಜೊತೆಗಿರುವ ವಿಡಿಯೋ ಮತ್ತು ಫೋಟೋಗಳು ಬಹಿರಂಗವಾದ ನಂತರ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಖಾರಟ್ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಗ ರೂಪಾಲಿ ಕೊಡೆ ಹಿಡಿದಿರುವ ಚಿತ್ರ ಹಾಗೂ ಖಾರಟ್ನ ಟ್ರಸ್ಟ್ ಜೊತೆಗಿನ ಸಂಬಂಧದ ಆರೋಪಗಳು ಈ ವಿವಾದಕ್ಕೆ ಕಾರಣವಾಗಿದ್ದವು.
ಶಿವಸೇನೆ (ಉದ್ಧವ್ ಠಾಕ್ರೆ ಬಣ), ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳ ಮುಖಂಡರು ರೂಪಾಲಿ ಚಕಣಕರ್ ರಾಜೀನಾಮೆಗೆ ಆಗ್ರಹಿಸಿದ್ದರು. ಜ್ಯೋತಿಷಿಯೊಂದಿಗೆ ತಮ್ಮ ಸಂಬಂಧ ಸೀಮಿತ ಎಂದು ಪ್ರತಿಪಾದಿಸುತ್ತಾ ಬಂದಿದ್ದ ರೂಪಾಲಿ, ಶುಕ್ರವಾರ ‘ವೈಯಕ್ತಿಕ ಕಾರಣ’ ನೀಡಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
Laxmi News 24×7