ರಾಯಚೂರು: ಕೇತುಗ್ರಸ್ಥ ಚಂದ್ರಗ್ರಹಣ ನಡುವೆಯೂ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ಭಕ್ತರು ರಾಯರ ವೃಂದಾವನ ದರ್ಶನ ಪಡೆಯುತ್ತಿದ್ದಾರೆ.
ಮಠದ ಯಾವುದೇ ಬಾಗಿಲು ಬಂದ್ ಮಾಡಿಲ್ಲ. ಆದ್ರೆ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಒಂದೆಡೆ ಹೋಳಿ ಹುಣ್ಣಿಮೆ ಹಾಗೂ ಇನ್ನೊಂದೆಡೆ ಚಂದ್ರ ಗ್ರಹಣ ಹಿನ್ನೆಲೆ ಭಕ್ತರ ಸಂಖ್ಯೆ ವಿರಳವಾಗಿದೆ. ಮಂತ್ರಾಲಯ ಮಠದಲ್ಲಿ ಬೆಳಿಗ್ಗೆ ರಾಯರ ವೃಂದಾವನಕ್ಕೆ ಜಲಾಭಿಷೇಕ ಹೊರತು ಪಡಿಸಿ ಬೇರೆ ಪೂಜೆ, ನೈವೇದ್ಯ ಅಲಂಕಾರವನ್ನ ಮಾಡಲಾಗಿಲ್ಲ. ಗಂಧಧಾರಣೆ, ತುಳಸಿ ಮಣಿಯೊಂದಿಗೆ ಪೂಜೆ ಮುಗಿಸಲಾಗಿದ್ದು. ಬೆಳಿಗ್ಗೆಯಿಂದ ಗ್ರಹಣ ಮುಗಿಯುವವರೆಗೂ ತೀರ್ಥ, ಪ್ರಸಾದ ವಿತರಣೆ ನಿಲ್ಲಿಸಲಾಗಿದೆ.
ಗ್ರಹಣ ವೇಳೆ ಶಾಂತಿ ಹೋಮ, ಬಳಿಕ ಸ್ವಚ್ಛತಾ ಕಾರ್ಯ ಹಾಗೂ ಯತಿಗಳ ವೃಂದಾವನಗಳಿಗೆ ಜಲಾಭಿಷೇಕ ಮಾಡಲಾಗುತ್ತದೆ. ಅದಾದ ಬಳಿಕವಷ್ಟೆ ರಾತ್ರಿವೇಳೆ ಎಂದಿನಂತೆ ಪೂಜೆ, ತೀರ್ಥ, ಪ್ರಸಾದ ಉತ್ಸವ ಸೇವೆಗಳು ನಡೆಯಲಿವೆ.
ಚಂದ್ರಗ್ರಹಣ ಹಿನ್ನೆಲೆ ಮಂತ್ರಾಲಯದಲ್ಲಿ ಭಕ್ತರು ರಾಯರ ವೃಂದಾವನ ದರ್ಶನ ಎರಡೆರಡು ಬಾರಿ ಪಡೆಯುವ ಮೂಲಕ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ದರ್ಶನಕ್ಕೆ ಯಾವುದೇ ನಿರ್ಬಂಧ ಇರದಿದ್ದರು ಭಕ್ತರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಭಕ್ತರು ಎಂದಿಗಿಂತ ಸುಲಭವಾಗಿ ದರ್ಶನ ಪಡೆಯುತ್ತಿದ್ದಾರೆ.
ಗ್ರಹಣದ ಹಿನ್ನೆಲೆ ಭಕ್ತರ ಸಂಖ್ಯೆ ಇಳಿಕೆಯಾಗಿದ್ದು, ಮಠಕ್ಕೆ ಬಂದ ಭಕ್ತರು ಸುಲಭವಾಗಿ ದರ್ಶನ ಪಡೆಯುತ್ತಿದ್ದಾರೆ. ಒಮ್ಮೆ ಸಮಾಧಾನವಾಗದ ಭಕ್ತರು ಎರಡೆರಡು ಬಾರಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
Laxmi News 24×7