ಬೆಂಗಳೂರು: ಜನರ ಹೃದಯ ಮಿಡಿತ ಸುಸ್ಥಿತಿಯಲ್ಲಿಡಲು ಶ್ರಮಿಸುವ ಖ್ಯಾತ ಜಯದೇವ ಆಸ್ಪತ್ರೆಯ ನೂತನ ಘಟಕ ನಿರ್ಮಾಣವಾದ ಸಂಗತಿ ನಿಜಕ್ಕೂ ರೋಚಕವಾಗಿದೆ. ಅದನ್ನು ಕೇಳಿದರೆ ಹೃದಯತುಂಬಿ ಬರುತ್ತದೆ. ಕೊಡುಗೈ ದಾನಿ ಎಂದೇ ಸುಪ್ರಸಿದ್ಧರಾದ ಇನ್ಫೋಸಿಸ್ ಪ್ರತಿಷ್ಠಾಣದ ಅಧ್ಯಕ್ಷೆ ಸುಧಾ ಮೂರ್ತಿ ಅವರ (Infosys Foundation chief Sudha Murthy) ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿ ಇಂದು ಜಯದೇವ ಆಸ್ಪತ್ರೆಯ (Sri Jayadeva Institute of Cardiovascular Sciences and Research) ಹೊಸ ಘಟಕ ನಿರ್ಮಾಣಗೊಂಡಿದೆ. ಇನ್ಫಿ ಸುಧಾ ಮೂರ್ತಿ ಅವರು 2018ರಲ್ಲಿ ಜಯದೇವಕ್ಕೆ ಬರುವ ಬಡ ರೋಗಿಗಳನ್ನ ನೋಡಿ ಆಸ್ಪತ್ರೆ ನಿರ್ಮಾಣದ ಸಾಹಸಕ್ಕೆ ಮುಂದಾದರು. ಜಯದೇವ ಆಸ್ಪತ್ರೆಗೆ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಭೇಟಿ ನೀಡಿದ್ದರು. ಅಲ್ಲಿ ಜಯದೇವ ರೋಗಿಗಳ ಸಂಖ್ಯೆ ಹಾಗೂ ಅಲ್ಲಿನ ಸ್ಥಿತಿಗತಿ ನೋಡಿದ್ರು. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಬರುವುದನ್ನು ನೋಡಿಕೊಂಡು ಹೋಗಿದ್ದರು. ರೋಗಿಗಳ ಊರು ಮತ್ತು ಆರ್ಥಿಕ ಸ್ಥಿತಿಗತಿಯನ್ನೂ ತಿಳಿದುಕೊಂಡಿದ್ದರು. ಕಡು ಬಡವರಿಗೂ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿರುವುದರ ಬಗ್ಗೆ ಮಾಹಿತಿ ಪಡೆದಿದ್ರು.
ಬೆಂಗಳೂರು ಜಯದೇವದಲ್ಲಿ ಹಾಸಿಗೆಗಳ ಕೊರತೆ ಇರುವುದನ್ನು ಗಮನಿಸಿದವರೇ ಆಸ್ಪತ್ರೆಯಿಂದ ವಾಪಸಾದ ಎರಡೇ ದಿನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರು ಕರೆ ಮಾಡಿ ಆಸ್ಪತ್ರೆಗೆ ಹೊಸ ಕಟ್ಟಡ ಕಟ್ಟಿಸಿಕೊಡುವುದಾಗಿ ಮಾತುಕೊಟ್ಟು ಬಿಟ್ಟರು. ಅಲ್ಲಿಂದ ಮೂರನೇ ದಿನವೇ ಜಯದೇವಕ್ಕೆ ಇನ್ಫೋಸಿಸ್ ಎಂಜಿನಿಯರ್ಸ್ ಭೇಟಿ ನೀಡಿ ಪ್ಲಾನ್ ಸಿದ್ಧಗೊಳಿಸಿಯೇಬಿಟ್ರು. ಆಸ್ಪತ್ರೆಯವರು 200 ಹಾಸಿಗೆ ಆಸ್ಪತ್ರೆಗೆ ಮನವಿ ಮಾಡಿದ್ದರು. ಆದ್ರೆ ಮಹಾತಾಯಿ ಸುಧಾ ಮೂರ್ತಿ 350 ಹಾಸಿಗೆ ಆಸ್ಪತ್ರೆ ಕಟ್ಟುವುದಾಗಿ ಹೇಳಿಹೋದರು.
ಅದರಂತೆ ಇಂದು ಇನ್ಫೋಸಿಸ್ ಫೌಂಡೇಷನ್ನಿಂದ 103 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡು, ರೋಗಿಗಳ ಸೇವೆಗೆ ಸಜ್ಜಾಗಿ ನಿಂತಿದೆ. ಜಯದೇವ ಆಸ್ಪತ್ರೆ ಆವರಣದಲ್ಲಿ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣಗೊಂಡಿದೆ.
ಇನ್ಫೋಸಿಸ್ ಫೌಂಡೇಷನ್ನಿಂದ ನೂತನ ಆಸ್ಪತ್ರೆ ನಿರ್ಮಾಣಗೊಂಡಿದ್ದು, ನವೆಂಬರ್ 17ರಂದು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದು ಜಯದೇವ ಆಸ್ಪತ್ರೆಯ ಮಹಾ ನಿರ್ದೇಶಕ, ಖ್ಯಾತ ವೈದ್ಯರಾದ ಡಾ. ಮಂಜುನಾಥ್ ಹೇಳಿದ್ದಾರೆ.
ಒಟ್ಟು 100 ಐಸಿಯು ಬೆಡ್ ಹೊಂದಿರುವ ನೂತನ ಆಸ್ಪತ್ರೆಯಲ್ಲಿ 250 ಜನರಲ್ ವಾರ್ಡ್ ಬೆಡ್, 2 OT, 1 ಹೈಬ್ರಿಡ್ OT, 2 ಕಾರ್ಡಿಕಲ್ ಕ್ಯಾಥ್ ಲ್ಯಾಬ್ಗಳು ಕಾರ್ಯನಿರ್ವಹಿಸಲಿವೆ. ಪ್ರತಿ 5 ನಿಮಿಷಕ್ಕೆ ಒಬ್ಬ ಹೃದ್ರೋಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಹೀಗಾಗಿ ಜಯದೇವ ಆಸ್ಪತ್ರೆ ಮೇಲೆ ಹೆಚ್ಚು ಒತ್ತಡವಾಗುತ್ತಿದೆ. ಹೀಗಾಗಿ ಆ ಒತ್ತಡ ತಗ್ಗಿಸಲು ನೂತನ ಆಸ್ಪತ್ರೆ ನೆರವಾಗಲಿದೆ.