ಬೆಂಗಳೂರು, ಮಾರ್ಚ್ 22: ಮೂಲ ಬಿಜೆಪಿಗರು ಮತ್ತು ವಲಸಿಗರು ಎನ್ನುವ ಚರ್ಚೆ ಪಕ್ಷದಲ್ಲಿ ಇದೇನು ಮೊದಲಲ್ಲ. ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಲವು ಬಾರಿ ಬಹಿರಂಗವಾಗಿಯೇ ಈ ಬಗ್ಗೆ ಮಾತನಾಡಿದ್ದರು.
ನಾವು ಬಂದಿದ್ದರಿಂದಲೇ ನೀವು ಸಚಿವರಾಗಿರುವುದು ಎಂದು ಬಾಂಬೆ ಫ್ರೆಂಡ್ಸ್ ಅದಕ್ಕೆ ಕೌಂಟರ್ ಅನ್ನೂ ಕೊಡುತ್ತಿದ್ದರು.
ಈ ವಿಚಾರ ಇತ್ತೀಚಿನ ದಿನಗಳಲ್ಲಿ ಪಕ್ಷದೊಳಗೆ ಅಷ್ಟೇನೂ ಚರ್ಚೆಯಾಗುತ್ತಿರಲಿಲ್ಲ. ಕಾರಣ, ದೊಡ್ಡವರ ಖಡಕ್ ಎಚ್ಚರಿಕೆ.
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನಮಗೆ ಏನು ಬೇಕು ಅದನ್ನು ಸಾಧಿಸುತ್ತಿದ್ದವರು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಎನ್ನುವುದು ಬಿಜೆಪಿಯೊಳಗೆಯೇ ಆಡಿಕೊಳ್ಳಲಾಗುತ್ತಿರುವ ಮಾತುಗಳು. ಇವರಿಗೆ ಮತ್ತು ಕೆಲವೊಂದು ಮೂಲ ಬಿಜೆಪಿಯವರಿಗೆ ಅಷ್ಟಕಷ್ಟೇ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದವು.
ಈಗ ಆರೋಗ್ಯ ಸಚಿವರ ಮೇಲೆ ಮುನಿಸಿಕೊಂಡಿರುವ ಬಿಜೆಪಿ ಮುಖಂಡರು, ಅವರು ಆಯೋಜಿಸಿದ್ದ ಭೋಜನಕೂಟಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದು ಒಂದು ಕಡೆ. ಇನ್ನೊಂದು ಕಡೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ.
ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಭೋಜನಕೂಟ
ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸಚಿವರು ಮತ್ತು ಶಾಸಕ ಮಿತ್ರರಿಗೆ ಬಾಳೆಎಲೆ ಭೋಜನಕೂಟ ಆಯೋಜಿಸಿದ್ದರು. ವೆಜ್ ಮತ್ತು ನಾನ್ ವೆಜ್ ಎರಡೂ ವ್ಯವಸ್ಥೆಗಳಿದ್ದವು. ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಹೆಚ್ಚಿನ ಶಾಸಕರು ಇದರಲ್ಲಿ ಭಾಗವಹಿಸಿದ್ದರು. ಆದರೆ, ಬಿಜೆಪಿಯ ಸುಮಾರು ಮೂವತ್ತಕ್ಕೂ ಹೆಚ್ಚು ಶಾಸಕರು ಭೋಜನಕೂಟದಲ್ಲಿ ಗೈರಾಗಿ, ಸುಧಾಕರ್ ವಿರುದ್ದ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.