ಬೆಳಗಾವಿ: ‘ಇದೇ 19ರಿಂದ 30ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಅತ್ಯಂತ ಮಹತ್ವ ಪಡೆದಿದೆ. ಇದರಲ್ಲಿ ಪೂರ್ಣ ಹಾಜರಾತಿ ಇರಬೇಕೆಂದು ಎಲ್ಲ ಶಾಸಕರಿಗೂ ಸೂಚಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅಧಿವೇಶನದ ಪೂರ್ವಸಿದ್ಧತೆಗಳನ್ನು ಸೋಮವಾರ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಕೆಲ ಸಚಿವರು, ಶಾಸಕರು ಅಧಿವೇಶನದ ವೇಳೆ ಗೋವಾ, ಮಹಾರಾಷ್ಟ್ರ ಕಡೆಗೆ ಪ್ರವಾಸಕ್ಕೆ ಹೋಗುತ್ತಾರೆ. ಗಂಭೀರ ವಿಷಯಗಳ ಚರ್ಚೆಯಲ್ಲಿ ಗೈರಾಗುತ್ತಾರೆ ಎಂದು ಹಲವರು ದೂರಿದ್ದಾರೆ. ಎಲ್ಲರೂ ಎಲ್ಲ ಕಲಾಪಗಳಲ್ಲೂ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದರು.
‘ನಾನು ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಅದು ತಪ್ಪು. ಅಧಿವೇಶನವನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು, ಹಗುರವಾಗಿ ಮಾತನಾಡಬಾರದು’ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
‘ಆರು ವಿಷಯಗಳ ಕುರಿತು ಚರ್ಚೆ’
ಈ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. 1) ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022, 2) ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ. ಈ ಎರಡನ್ನೂ ಬೆಂಗಳೂರು ಅಧಿವೇಶನದಲ್ಲಿ ಮಂಡಿಸಿದ್ದೇವೆ. ಇಲ್ಲಿ ಚರ್ಚಿಸಿ ಅಂಗೀಕರಿಸಲಾಗುವುದು. 3) ಕನ್ನಡ ಭೂ ಕಂದಾಯ ವಿಧೇಯಕ 4) ಅನುಸೂಚಿತ ಜಾತಿ- ಪಂಗಡಗಳ ಶಿಕ್ಷಣ ಸಂಸ್ಥೆಗಳ ಸ್ಥಾನಗಳಲ್ಲಿ ಮತ್ತು ರಾಜಾಧೀನ ಸೇವೆಗಳ ನೇಮಕಾತಿಗಳಲ್ಲಿ ಮೀಸಲಾತಿ ವಿಧೇಯಕ 5) ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ 6) ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ. ಇವುಗಳಲ್ಲದೇ ಇನ್ನೂ ಹೊಸ ವಿಷಯಗಳೂ ಚರ್ಚೆಗೆ ಬರಲಿವೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಿಸಿದರು.