ಮೈಸೂರು: ”ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದಂತೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕೂಡಾ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು” ಎಂದು ಜನಾಂದೋಲನ ಮಹಾಮೈತ್ರಿ ಅಧ್ಯಕ್ಷ ಎಸ್. ಆರ್. ಹಿರೇಮಠ ಕೇಂದ್ರ ಸರ್ಕಾರದ ವಿರುದ್ಧ ಗರಂ ಆದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿಗಳ ಡಬಲ್ ಎಂಜಿನ್ ಸರಕಾರವನ್ನು ಸೋಲಿಸುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡರು. ಹೀಗಾಗಿ ಇದರ ಪ್ರೇರಣೆ ಅಡಿ ಮುಂದಿನ ಲೋಕಸಭಾ ಚುನಾವಣೆ ಇರಲಿ” ಎಂದು ಜನರಿಗೆ ಮನವಿ ಮಾಡಿದರು.
”ಜು.15ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಉಳಿದ ಸಂಘಟನೆಗಳೊಂದಿಗೆ ವಿಸ್ಕೃತ ಸಭೆ ನಡೆಯಲಿದೆ. ಈಗಾಗಲೇ ನೂತನ ಸರಕಾರ ರೈತ ವಿರೋಧಿ, ಕಾರ್ಪೊರೇಟ್ ಪರ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಪಡಿಸಿದ್ದರೂ, ಹಿಂದಿನ ಬಿಜೆಪಿ ಸರಕಾರ ದುರಾಡಳಿತದಲ್ಲಿ ತಂದಿದೆ. ಇನ್ನೆರೆಡೆ ಕಾಯ್ದೆಗಳನ್ನು ರದ್ದುಪಡಿಸಿ, ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಿನ ಪರಿಸ್ಥಿತಿ ಪುನರ್ ಸ್ಥಾಪಿಸಬೇಕೆಂದು ಒತ್ತಾಯಿಸಲಾಗುವುದು” ಎಂದರು.
”2024ರ ಲೋಕಸಭಾ ಚುನಾವಣೆ, ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿಗಳನ್ನು ನಿರ್ಣಾಯಕವಾಗಿ ಸೋಲಿಸುವ ಹಾಗೂ ಈ ಶಕ್ತಿಗಳನ್ನು ಸಮರ್ಥವಾಗಿ ಎದುರಿಸುವ ದಿಸೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ರಾಜಕಾರಣಕ್ಕಾಗಿ ಜನಾಂದೋಲನ ರೂಪಿಸಲು ವಿವಿಧೆಡೆ ಸಭೆಗಳನ್ನು ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.