ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕಿನ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳ ವೈದ್ಯರ ಸಭೆಯು ತಹಸೀಲ್ದಾರ್ ಎಂ.ಶಿವಮೂರ್ತಿ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಕೊರೊನಾ ಸೋಂಕು ತಡೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಅಗತ್ಯ ಸಹಕಾರ ನೀಡಬೇಕು. ಸಾಮಾನ್ಯ ರೋಗಿಗಳಿಗೆ ತಾವು ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಬೇಕು.
ಮುಖ್ಯವಾಗಿ ವೈದ್ಯರಾದ ತಾವುಗಳು ಸುರಕ್ಷತಾ ಕವಚಗಳನ್ನು ತೊಟ್ಟು ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಬೇಕು. ರೋಗಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಕೆಮ್ಮು, ನೆಗಡಿಯಂತಹ ಲಕ್ಷಣಗಳು ಇದ್ದಲ್ಲಿ ಅಂತಹ ರೋಗಿಯನ್ನು ಕೆ.ಆರ್.ಪೇಟೆ ಪಟ್ಟಣದಲ್ಲಿ ತೆರೆಯಲಾಗಿರುವ ಫೀವರ್ ಕ್ಲಿನಿಕ್ ಗೆ ರೋಗಿಗಳನ್ನು ಕಳುಹಿಸಿಕೊಡಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು. ಸರ್ಕಾರಿ ವೈದ್ಯರಿಗೆ ಹಾಗೂ ದಾದಿಯರಿಗೆ ನೀಡಿರುವ ಕೋವಿದ್- 19 ವಿಮಾ ಸೌಲಭ್ಯಗಳನ್ನು ಖಾಸಗಿ ವೈದ್ಯರಿಗೂ ನೀಡಬೇಕು. ಅಗತ್ಯ ಸುರಕ್ಷತಾ ಸಾಧನಗಳನ್ನು ಖಾಸಗಿ ಕ್ಲಿನಿಕ್ ನ ವೈದ್ಯರು ಮತ್ತು ದಾದಿಯರಿಗೂ ನೀಡಬೇಕು ಎಂದು ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಒತ್ತಾಯ ಮಾಡಿದರು.
ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್, ಹೆಲ್ತ್ ಇನ್ಸ್ ಪೆಕ್ಟರ್ ಸತೀಶ್, ಅರವಿಂದ್ ಕ್ಲಿನಿಕ್ ಡಾ.ಆರ್.ಅರವಿಂದ್, ದಿವ್ಯಚೇತನ್ ನರ್ಸಿಂಗ್ ಹೋಂ ಡಾ.ಬಿ.ಇ.ದಿನೇಶ್, ರಾಜೇಶ್ವರಿ ಕ್ಲಿನಿಕ್ ಡಾ.ರಾಜೇಶ್ವರಿ, ರಾಧಾ ಕ್ಲಿನಿಕ್ ಡಾ.ದಿವಾಕರ್, ಮಾದೇಗೌಡ ಆಸ್ಪತ್ರೆಯ ಡಾ.ಲಿಖಿತ್, ಗುಪ್ತಾ ಕ್ಲಿನಿಕ್ ಡಾ.ಭದ್ರೀನಾಥ್, ಉಪತಹಸೀಲ್ದಾರ್ ಲಕ್ಷ್ಮೀಕಾಂತ್ ಸೇರಿದಂತೆ ಹಲವು ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.