ಬೆಳಗಾವಿ: ಹೈಕಮಾಂಡ್ನಿಂದ ಸಂಜೆಯ ವೇಳೆಗೆ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಹೆಚ್ಚು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಮಾಧ್ಯಮದವರೊಂದಿಗೆ ಮಾತನಾಡಿ, ಸಂಜೆಯ ವೇಳೆಗೆ ಹೈಕಮಾಂಡ್ ಅವರ ನಿರ್ಧಾರವನ್ನು ಕಳುಹಿಸುತ್ತಾರೆ. ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದು ಆಗ ತಿಳಿಯಲಿದೆ. ಯವುದೇ ಸ್ವಾಮಿಜಿಗಳು ಸಭೆ, ಸಮಾವೇಶ ಮಾಡುವ ಅಗತ್ಯವಿಲ್ಲ. ನನಗೆ ಮೋದಿ, ಅಮಿತ್ ಶಾ ಅವರ ಕುರಿತಾಗಿ ವಿಶ್ವಾಸವಿದೆ ಎಂದಿದ್ದಾರೆ.
ಎರಡು ವರ್ಷಗಳ ಕೆಲಸ ತೃಪ್ತಿ ತಂದಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಿಮಗೆ ತೃಪ್ತಿ ತಂದಿದ್ದರೆ ಸಾಕು ಎಂದು ನಗುತ್ತಾ ಸಿಎಂ ಬಿಎಸ್ವೈ ತೆರಳಿದ್ದಾರೆ.
ಶಶಿಕಲಾ ಜೊಲ್ಲೆ ಅವರು ಮೊಟ್ಟೆಟೆಂಡರ್ ವಿಚಾರಕ್ಕೆ ಹಣವನ್ನು ಪಡೆದು ಟೆಂಡರ್ ಕೊಟ್ಟಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ನಾನು ಈ ಕುರಿತಾಗಿ ಮಾಧ್ಯಮದಲ್ಲಿ ನೋಡಿದ್ದೇನೆ. ಈ ವಿಚಾರವಾಗಿ ನಾನು ವಾಸ್ತವ ಸ್ಥಿತಿ ಗತಿಗಳನ್ನು ತಿಳಿದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಮಳೆಯಾಗಿದೆ. ಹೀಗಾಗಿ ನದಿಗಳು ತುಂಬಿ ತುಳುಕುತ್ತಿವೆ. ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಇಂದು ಮಳೆ ಸ್ವಲ್ಪ ಕಡಿಮೆಯಾಗಿದೆ. ಇದೇ ತರಹ ಮಳೆ ಕಡಿಮೆಯಾಗಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತೆ ಆಗಲಿ ಎಂದು ನಾನು ದೇವರನ್ನು ಪ್ರಾರ್ಥೀಸುತ್ತೇನೆ ಎಂದು ಹೇಳಿದ್ದಾರೆ.