ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರು ಬಳಸಿ ಹಲವರಿಗೆ ವಂಚನೆ ಎಸಗಿದ್ದ ಆರೋಪದ ಮೇಲೆ ಸಚಿವ ಶ್ರೀರಾಮುಲು ಪಿಎ ರಾಜಣ್ಣರನ್ನು ಸಿಸಿಬಿ ಪೊಲೀಸರು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು, ವಿಜಯೇಂದ್ರ ವಿಚಾರವಾಗಿ ನಾನು ಮಾತಾಡೋದು ನನ್ನ ಲೆವೆಲ್ ಅಲ್ಲ. ಪಿಎಗಳ ವ್ಯವಹಾರಕ್ಕೆ ನಾನು ಮಧ್ಯ ಪ್ರವೇಶ ಮಾಡೊಲ್ಲ. ಅದರ ಬಗ್ಗೆ ನಾನು ಕಾಮೆಂಟ್ ಕೂಡಾ ಮಾಡೊಲ್ಲ. ಅವರ ಆಡಳಿತದ ಬಗ್ಗೆ ಪ್ರತಿದಿನ ಮಾಧ್ಯಮಗಳು ತೋರಿಸ್ತಿದ್ದೀರಾ. ಅದನ್ನ ನಾವು ತಿಳಿದುಕೊಳ್ತಿದ್ದೇವೆ. ಇದು ಅವ್ರ ಸರ್ಕಾರ ಫೌಂಡೇಶನ್ ಏನು ಅಂತ ಗೊತ್ತಾಗ್ತಿದೆ ಎಂದರು.
ಇನ್ನು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಆ 17 ಜನ ಕಾರಣ ಎನ್ನುತ್ತಾರೆ. ನನ್ನ ಅಧಿಕಾರದಿಂದ ತೆಗೆದದ್ದು 17 ಜನ ಅಲ್ಲ. ಅವರು ನನ್ನ ಜೀವ ಉಳಿಸಿದ ಪುಣ್ಯಾತ್ಮರು ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಹೇಳಿಕೆಯೇ ನಮಗೆ ಅರ್ಥ ಆಗಿಲ್ಲ. ನಾನೂ ಅ ಹೇಳಿಕೆ ನೋಡಿದೆ. ಎರಡು ಮೂರು ಸಾರಿ ಓದುತ್ತಾ ಇದ್ದೇನೆ, ನನಗೆ ಅ ಹೇಳಿಕೆ ಅರ್ಥ ಆಗಲಿಲ್ಲ. ಕುಮಾರಸ್ವಾಮಿಗೆ ಯಾರ್ ಏನು ಮಾಡೋಕೆ ಹೋಗಿದ್ರೋ ನನಗೆ ಗೊತ್ತಿಲ್ಲ. ಪಾರ್ಟಿ ಬಿಟ್ಟು ಬಿಜೆಪಿಗೆ ಹೋಗಿ ಮಂತ್ರಿ ಆಗಿ ಬೆನ್ನಿಗೆ ಚೂರಿ ಹಾಕಿದ್ದಾರೆ. ನೋವಾಗಿದೆ ಅದರ ಬಗ್ಗೆ ನನ್ನ ಸಹಮತ ಇದೆ. ಆದ್ರೆ ಜೀವ ಉಳಿಸೋ ಬಗ್ಗೆ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಕಾಂಗ್ರೆಸ್ ಗೆ ತಂದೆ-ತಾಯಿ ಇಲ್ಲ ಅನ್ನೋ ಸಚಿವ ಈಶ್ವರಪ್ಪ ಹೇಳಿಕೆಗೆ ಡಿಕೆಶಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಈಶ್ವರಪ್ಪನಾ ಅಯ್ಯೋ ಪಾಪ. ಅಸೆಂಬ್ಲಿ ಎಲೆಕ್ಷನ್ ಬರಲಿ ಎಲ್ಲದ್ದಕ್ಕೂ ಉತ್ತರ ಕೊಡ್ತೀನಿ ಎಂದು ಮಾರ್ಮಿಕವಾಗಿ ನುಡಿದರು. ಇನ್ನು ಕೆಪಿಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಅನುಭವದ ಬಗ್ಗೆ ಈಗ ಹೇಳೋಕೆ ಆಗೊಲ್ಲ.ಮುಂದೆ ಹೇಳೋಣ. ನೀವೇ ನೋಡಿದ್ದೀರಾ ನೀವೆ ಪ್ರಚಾರ ಮಾಡಿದ್ದೀರಾ. ಈಗ ನಾನೇನು ಹೇಳೊಲ್ಲ ಎಂದರು.