ಬೆಂಗಳೂರು: ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ಜ್ಞಾನಭಾರತಿ ಕ್ಯಾಂಪಸ್ನ ಕಲಾಗ್ರಾಮದಲ್ಲಿ ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆದಿದ್ದು, 3 ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಜೊತೆಗೆ ಪೊಲೀಸ್ ಬ್ಯಾಂಡ್ನಿಂದ ರಾಷ್ಟ್ರಗೀತೆ ನುಡಿಸಿ ಗೌರವ ನೀಡಲಾಯಿತು. ಬೌದ್ಧ ಧರ್ಮದ ಆಚರಣೆಯಂತೆ ಅಂತಿಮ ವಿಧಿವಿಧಾನ ನೆರವೇರಿದ್ದು, ಬೌದ್ಧ ಬಿಕ್ಕುಗಳು ಪಂಚಶೀಲ ತತ್ವಗಳನ್ನು ಬೋಧಿಸಿದರು.
ಡಾ.ಸಿದ್ದಲಿಂಗಯ್ಯ ಚಿತೆಗೆ ಪುತ್ರ ಗೌತಮ್ ಅಗ್ನಿ ಸ್ಪರ್ಶ ಮಾಡಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪಶು ಸಂಗೋಪನೆ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ಡಿಸಿಪಿ ಸಂಜೀವ್ ಎಂ.ಪಾಟೀಲ್ ಮತ್ತಿತರರು ಹಾಜರಿದ್ದರು.
ಹಿರಿಯ ಕವಿ, ಸಾಹಿತಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಬೌದ್ಧ ಬಿಕ್ಕುಗಳು ಸಿದ್ದಲಿಂಗಯ್ಯ ಅವರ ಪಾರ್ಥಿವ ಶರೀರದ ಪಕ್ಕದಲ್ಲಿ ಬುದ್ಧನ ವಿಗ್ರಹವಿಟ್ಟು ಅಂತಿಮ ವಿಧಿವಿಧಾನ ಸಲ್ಲಿಸಿದರು. ದಮ್ಮಚಾರಿಯಿಂದ ತ್ರಿಶರಣ ಪಂಚಶೀಲವನ್ನು ಪಠಿಸಲಾಯಿತು. ಪಾರ್ಥಿವ ಶರೀರದ ಮುಂದೆ ಭಾವುಕರಾಗಿ ಸಿದ್ದಲಿಂಗಯ್ಯರವರ ಶಿಷ್ಯರು ಓ ನನ್ನ ಚೇತನ ಹಾಡನ್ನ ಹಾಡಿ ಅಂತಿಮ ನಮನ ಸಲ್ಲಿಸಿದರು.
ಸಾಹಿತಿ ಡಾ.ಸಿದ್ದಲಿಂಗಯ್ಯ ದಲಿತರ ಪರ ಧ್ವನಿಯಾಗಿದ್ದರು. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಅವರೂ ಒಬ್ಬರು. ಎಲ್ಲ ನೋವುಂಡು ಡಾ.ಸಿದ್ದಲಿಂಗಯ್ಯ ಜನಧ್ವನಿಯಾಗಿದ್ದರು. ನೋವನ್ನು ತಮ್ಮ ಕವನಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಇಷ್ಟು ಎತ್ತರಕ್ಕೆ ಬೆಳೆದು, ದಲಿತರ ಸಾಮಾಜಿಕ ನ್ಯಾಯದ ಪರವಾಗಿ ನಿಂತವರು. ಕೊನೆಯವರೆಗೂ ದಲಿತರ ಉದ್ಧಾರ, ಏಳಿಗೆಗೆ ಯತ್ನಿಸಿದ್ದರು. ಯಾವಾಗ ಸಿಕ್ಕರೂ ಆತ್ಮೀಯತೆಯಿಂದ ಮಾತಾಡಿಸುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯವನ್ನು ಹಂಚಿಕೊಂಡರು
Laxmi News 24×7