ಬೆಂಗಳೂರು : ಒಂದೊಮ್ಮೆ ಜೂನ್ 14 ರ ನಂತರ ಅನ್ಲಾಕ್ ಆದರೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭಿಸುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಜೂನ್ 7 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ನೀಡಲಾಗಿದೆ.
ಕರೊನಾ ಮೊದಲ ಅಲೆ ವೇಳೆ ಅನ್ಲಾಕ್ ಮಾಡಿದಾಗ ಯಾವ ನಿಯಮಾವಳಿ ಇತ್ತೋ ಅದೇ ನಿಯಮಾವಳಿಗಳನ್ನು ಈಗ ಲಾಕ್ಡೌನ್ ತೆರವಾದ ಸಂದರ್ಭದಲ್ಲೂ ಫಾಲೋ ಮಾಡಲು ನಿರ್ಧರಿಸಲಾಗಿದೆ. ಬಸ್ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿರುವ ಸಾರಿಗೆ ನಿಗಮಗಳು, ಜೂನ್ 14 ರ ನಂತರಕ್ಕೆ ಸರ್ಕಾರ ನೀಡಲಿರುವ ಮಾರ್ಗಸೂಚಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿವೆ.
ಬಿಎಂಟಿಸಿಯಲ್ಲಿ 6500 ಬಸ್ಸುಗಳಿವೆ. ಅದರಲ್ಲಿ 1500 ದಿಂದ 2000 ಬಸ್ಸುಗಳು ರೋಡಿಗಿಳಿಯುವ ಸಾಧ್ಯತೆ ಇದೆ. ಇನ್ನು ವೋಲ್ವೋ ಬಸ್ಸುಗಳು ಸಂಚಾರ ಮಾಡೋದಿಲ್ಲ, ನಾರ್ಮಲ್ ಬಸ್ಸುಗಳಿಗೆ ಮಾತ್ರ ಅವಕಾಶವಿರಲಿದೆ. ಬಸ್ಸಿನಲ್ಲಿ ಶೇ. 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿರಲಿದ್ದು, ನಿಂತು ಪ್ರಯಾಣ ಮಾಡಲು ಅವಕಾಶ ಇರೋದಿಲ್ಲ. ಆಟೋ, ಓಲಾ, ಊಬರ್ ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಒದಗಿಸಲಿದ್ದು, ಜೂನ್ ಕೊನೆಯವರೆಗೂ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎನ್ನಲಾಗಿದೆ.
ಕೆಎಸ್ಆರ್ಟಿಸಿಯಲ್ಲಿ 8 ಸಾವಿರ ಬಸ್ಸುಗಳಿವೆ. ಅದರಲ್ಲಿ 3 ಸಾವಿರ ಬಸ್ಸುಗಳು ಮಾತ್ರ ರೋಡಿಗಿಳಿಯುವ ಸಾಧ್ಯತೆ ಇದೆ. ಕರೊನಾ ಹಿನ್ನೆಲೆಯಲ್ಲಿ ಎಸಿ ಬಸ್ಸುಗಳನ್ನು ರೋಡಿಗಿಳಿಸದಿರಲು ಚಿಂತನೆ ನಡೆದಿದೆ. ಇನ್ನು ಅಂತರ್ರಾಜ್ಯ ಬಸ್ ಸಂಚಾರ ಇರೋದಿಲ್ಲ. ಈ ಬಸ್ಸುಗಳಲ್ಲೂ ಅರ್ಧದಷ್ಟು ಸಾಮರ್ಥ್ಯವನ್ನು ಮಾತ್ರ ತುಂಬಲು ಅವಕಾಶ ನೀಡಲಿದ್ದು, ಮೂರು ಸೀಟ್ ಕಡೆಯಲ್ಲಿ ಇಬ್ಬರು, ಎರಡು ಸೀಟ್ ಕಡೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ನಿಂತು ಪ್ರಯಾಣಿಸಲು ಅನುಮತಿ ನೀಡುವುದಿಲ್ಲ ಎನ್ನಲಾಗಿದೆ.
Laxmi News 24×7