ಬೆಂಗಳೂರು,ಜು.31-ಬಿಪಿಎಲ್ ಕಾರ್ಡ್ ಇಲ್ಲದವರು ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ, ಮುಖ್ಯವಾಗಿ ವಲಸಿಗರಿಗೆ ನವೆಂಬರ್ವರೆಗೆ ಅಕ್ಕಿ ಮತ್ತು ಧಾನ್ಯಗಳನ್ನು ವಿತರಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ರಾಜ್ಯ ಸರ್ಕಾರವು ತನ್ನ ಗೋದಾಮಿನಲ್ಲಿ 28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹೊಂದಿದ್ದು, ಇದು ಎರಡು ತಿಂಗಳವರೆಗೆ ಮಾತ್ರ ಸಾಕಾಗಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಈ ಸಂಬಂಧ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಅಕ್ಕಿಯನ್ನು ಪಡೆಯದ ವಲಸೆ ಕಾರ್ಮಿಕರಿಗೆ ಅಕ್ಕಿ ಮತ್ತು ಧಾನ್ಯಗಳನ್ನು ಪೂರೈಸಲು ಅವರು ಮೌಖಿಕವಾಗಿ ಅನುಮತಿ ನೀಡಿದ್ದಾರೆ. ಆದರೆ ಪ್ರತಿ ತಿಂಗಳು ಅಕ್ಕಿ ನೀಡಬೇಕಾಗಿದೆ.
ಈ ಹಿಂದೆ ಉಚಿತ ಅಕ್ಕಿ ನೀಡಿದ್ದ ಜನರನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ, ನಾವು ಅವರಿಗೂ ಕೊಡಬೇಕು. ಯಾರೂ ಹಸಿವಿನಿಂದ ಬಳಲಬಾರದು ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಪ್ರಕಾರ ರಾಜ್ಯ ಸರ್ಕಾರವು 5 ಕೆಜಿ ಅಕ್ಕಿ ಮತ್ತು 1 ಕೆಜಿ ಧಾನ್ಯವನ್ನು 13.5 ಲಕ್ಷ ಜನರಿಗೆ ವಿತರಿಸಿದೆ. ಸಾಂಕ್ರಾಮಿಕ ರೋಗದ ಕಾರಣದಿಂದಾದ ಲಾಕ್ಡೌನ್ ಮತ್ತು ಉದ್ಯೋಗ ನಷ್ಟದಿಂದಾಗಿ ಏಪ್ರಿಲ್ನಿಂದ ಇಲ್ಲಿನವರೆಗಿನ ಅವಧಿಯಲ್ಲಿ ಮೇಲ್ಕಂಡ ಪ್ರಮಾಣದ ಆಹಾರಾ ಧಾನ್ಯ ವಿತರಣೆಯಾಗಿದೆ.
ಈಗ, ಅನೇಕರು ತಮ್ಮಸ್ವಂತ ಊರಿಗೆ ಮರಳಿದ ಕಾರಣ ವಲಸಿಗರ ಸಂಖ್ಯೆ 12 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಎಲ್ಲ ಜನರಿಗೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ಇರುವುದಿಲ್ಲ ಆದರೆ ಅವರ ಆಧಾರ್ ಕಾರ್ಡ್ ಆಧರಿಸಿ ಅಕ್ಕಿ ನೀಡಲಾಗಿದೆ.
ಪ್ರಸ್ತುತ, ಕರ್ನಾಟಕ ಮತ್ತು ರಾಜಸ್ಥಾನ ಮಾತ್ರ ವಲಸಿಗರಿಗೆ ಉಚಿತ ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿದೆ. ಅನ್ನ ಭಾಗ್ಯ ಯೋಜನೆಯಡಿ 1.27 ಕೋಟಿ ಕುಟುಂಬಗಳಿಗೆ ರಾಜ್ಯ ಸರ್ಕಾರ ಅಕ್ಕಿ, ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸುತ್ತದೆ.
ಇವರೆಲ್ಲರೂ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರು. ಇದು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿದ್ದರೂ, ಇದನ್ನು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.