ಬೆಂಗಳೂರು: ಸರಿಗಮಪ ಖ್ಯಾತಿಯ ಪೊಲೀಸ್ ಸಿಂಗರ್ ಸುಬ್ರಮಣಿ ಪತ್ನಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊರೊನಾದಿಂದ ಸಾವನ್ನಪ್ಪಿಲ್ಲ ಕೌಟುಂಬಿಕ ಕಲಹ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.
ಸುಬ್ರಮಣಿ ಪತ್ನಿ ಜ್ಯೋತಿ (33) ಮೇ 7 ರಂದು ಕೋಲಾರದ ಧರ್ಮರಾಯನಗರದ ನಿವಾಸದಲ್ಲಿ ಆತ್ಮಹತ್ಯೆ ಯತ್ನಿಸಿದ್ದರು. ಕೂಡಲೇ ಕೋಲಾರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುಬ್ರಮಣಿ ಪತ್ನಿಗೆ ವೆಂಟಿಲೇಟರ್ ಬೆಡ್ ಸಿಗದೇ ಪರದಾಡಿದ್ದರು. ಆ ಬಳಿಕ ಸಂಬಂಧಿಕರು ಬೆಂಗಳೂರು ಹೊರವಲಯದ ಹೊಸಕೋಟೆ ಖಾಸಗಿ ಆಸ್ಪತ್ರೆಗೆ ನಿನ್ನೆ ಸಂಜೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಜ್ಯೋತಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ದಾಖಲಿಸಿದ ವೇಳೆ ಜ್ಯೋತಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಕೋವಿಡ್ ಸೋಂಕಿನಿಂದ ಸುಬ್ರಮಣಿ ಪತ್ನಿ ಜ್ಯೋತಿ ಮೃತಪಟ್ಟಿದ್ದಾಗಿ ಪೊಲೀಸರ ವಾಟ್ಸ್ ಅಪ್ ಗ್ರೂಪ್ಗಳಲ್ಲಿ ಫೋಟೋ ವೈರಲ್ ಆಗಿತ್ತು.

ಹೆಡ್ ಕಾನ್ಸ್ ಸ್ಟೇಬಲ್ ಸುಬ್ರಮಣಿ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದರು. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಸುಬ್ರಮಣಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹ ಆರೋಪ ಹಾಗೂ ಖಿನ್ನತೆಗೊಳಗಾಗಿದ್ದ ಶಂಕೆ ವ್ಯಕ್ತವಾಗತ್ತಿದೆ. ಕೋಲಾರ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Laxmi News 24×7