ಬೆಂಗಳೂರು: ಕೊರೊನಾ ಸೋಂಕು ಕಟ್ಟುನಿಟ್ಟಾಗಿ ನಿಯಂತ್ರಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ. ಯಾರೋ ಬಂದು ಹೇಳಿದ ಮಾತ್ರಕ್ಕೆ ನಿಯಮಗಳನ್ನೇ ವಾಪಸ್ ಪಡೆದುಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕಳೆದ ಒಂದು ವಾರದಲ್ಲಿ 15 ಪಟ್ಟು ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಆದರೂ ಆ ನಿಟ್ಟಿನಲ್ಲಿ ಸರ್ಕಾರ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಕಳೆದ ಎಂಟು ದಿನಗಳ ಹಿಂದೆ ಥಿಯೇಟರ್, ಜಿಮ್ ಬಂದ್ ಮಾಡಬೇಕು ಎಂಬ ನಿಯಮ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ ಚಿತ್ರೋದ್ಯಮ, ಜಿಮ್ ನವರು ಬಂದು ಧಮ್ಕಿ ಹಾಕಿದರೆಂದು ತಕ್ಷಣ ನಿಯಮ ವಾಪಸ್ ಪಡೆಯಲಾಯಿತು ಇಂತಹ ಕ್ರಮಗಳು ಸೂಕ್ತವಲ್ಲ ಎಂದು ಕಿಡಿಕಾರಿದರು.
ಕಠಿಣ ನಿಯಮಕ್ಕೆ ತಜ್ಞರು ಸಲಹೆ ನೀಡಿದ್ದರೂ ಕೂಡ ಯಾರೋ ಸೆಲೆಬ್ರಿಟಿಗಳು ಬಂದು ಹೇಳಿದಾಕ್ಷಣ ವಿಪಕ್ಷದವರು, ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಅವರ ಮಾತಿಗೆ ಮಣಿಯುವಂತೆ ಮಾಡಿದರು. ಇದರಿಂದ ಇಂದು ಎಲ್ಲರೂ ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಜನರ ಜೀವ ಉಳಿಸುವನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದು ಹೇಳಿದರು.
Laxmi News 24×7