Breaking News

ಖಜಾನೆಯಿಂದ ಹೊರಗುಳಿದ ₹ 17,000 ಕೋಟಿ: ಶ್ವೇತಪತ್ರ ಪ್ರಕಟಿಸಲು ಪಾಟೀಲ್‌ ಆಗ್ರಹ

Spread the love

ಬೆಂಗಳೂರು: ಅಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿರುವ ಪ್ರತ್ಯೇಕ ಠೇವಣಿಗಳು ಸೇರಿದಂತೆ ₹17,000 ಕೋಟಿ ಮೊತ್ತ ರಾಜ್ಯ ಸರ್ಕಾರದ ಖಜಾನೆಯಿಂದ ಹೊರಗಿದೆ. ಈ ಕುರಿತು ತಕ್ಷಣವೇ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು ಎಂದು ಕಾಂಗ್ರೆಸ್‌ನ ಎಚ್‌.ಕೆ. ಪಾಟೀಲ ಗುರುವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಈ ಕುರಿತು ಕೆಲವು ಮಾಹಿತಿ ಲಭಿಸಿತ್ತು. ಪರಿಶೀಲನೆ ನಡೆಸುವಂತೆ ಸಮಿತಿಯಿಂದ ಪ್ರಧಾನ ಲೆಕ್ಕ ನಿಯಂತ್ರಕರಿಗೆ ಪತ್ರ ಬರೆಯಲಾಗಿತ್ತು. ಈಗ ಪ್ರಧಾನ ಲೆಕ್ಕ ನಿಯಂತ್ರಕರಿಂದ ಬಂದಿರುವ ವರದಿ ಅದನ್ನು ಸಾಬೀತುಪಡಿಸಿದೆ’ ಎಂದರು.

76 ಪಿ.ಡಿ ಖಾತೆಗಳಲ್ಲಿ ₹ 4,421.26 ಕೋಟಿ ಠೇವಣಿ ಇದೆ. ಕೆಲವು ಇಲಾಖೆಗಳ ಅಧಿಕಾರಿಗಳು ಪ್ರತ್ಯೇಕ ಪಿ.ಡಿ ಖಾತೆಗಳಲ್ಲಿ ಇರಿಸಿರುವ ₹ 2,741 ಕೋಟಿ ಮುರು ವರ್ಷಗಳಿಂದ ಬಳಕೆಯಾಗದೆ ಉಳಿದಿದೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾಗಿದ್ದ ₹ 10,000 ಕೋಟಿಯನ್ನು ಅಧಿಕಾರಿಗಳು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದಾರೆ. ಈ ಹಣ ಖಜಾನೆ ಇಲಾಖೆಯಿಂದ ಹೊರಗೆ ಉಳಿದುಕೊಂಡಿದೆ ಎಂದು ಪ್ರಧಾನ ಲೆಕ್ಕ ನಿಯಂತ್ರಕರು ಹಣಕಾಸು ಇಲಾಖೆಗೆ ಬರೆದಿರುವ ಪತ್ರವನ್ನು ಪ್ರದರ್ಶಿಸಿದರು.

‘ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಖಜಾನೆಯಿಂದ ಹೊರಕ್ಕೆ ಇರುವುದರಿಂದ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಲೆಕ್ಕ ನಿಯಂತ್ರಕರು ಸಂಶಯ ವ್ಯಕ್ತಪಡಿಸಿದ್ದಾರೆ. ಇಂತಹ ಲೋಪಗಳಿಗೆ ಆರ್ಥಿಕ ಇಲಾಖೆಯ ಕೋಡ್‌ಗಳೇ ಕಾರಣ. ತಕ್ಷಣವೇ ಕೋಡ್‌ಗಳ ಪರಿಷ್ಕರಣೆ ಆಗಬೇಕು. ₹ 17,000 ಕೋಟಿ ಮೊತ್ತ ಎಲ್ಲೆಲ್ಲಿ ಇದೆ ಎಂಬುದರ ಸಮಗ್ರ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ಹುದ್ದೆ ತುಂಬದೆ ವಂಚನೆ: ಈಗ ಎಲ್ಲರೂ ಮೀಸಲಾತಿಯ ಕುರಿತು ತೋಳೇರಿಸಿ ಮಾತನಾಡುತ್ತಿದ್ದಾರೆ. ಆದರೆ, 15 ವರ್ಷಗಳಿಂದ ರಾಜ್ಯ ಸರ್ಕಾರದ 2.5 ಲಕ್ಷ ಹುದ್ದೆಗಳನ್ನು ಖಾಲಿ ಇಡಲಾಗಿದೆ. ಎಲ್ಲ ಹುದ್ದೆಗಳನ್ನೂ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ. ಮೀಸಲಾತಿಗೆ ಅರ್ಹರಾದವರಿಗೆ ಆರ್ಥಿಕ ಮುಗ್ಗಟ್ಟಿನ ಕಾರಣ ನೀಡಿ ವಂಚಿಸಲಾಗಿದೆ ಎಂದು ಪಾಟೀಲ ದೂರಿದರು.

 


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ