ಬೆಂಗಳೂರು: ಮುಖ್ಯಮಂತ್ರಿಗಳು ಐದು ವರ್ಷ ಇರುವುದಿಲ್ಲ ಎಂದು ನಾವುಗಳು ಹೇಳಿಲ್ಲ. ಅವರೇ ತಾನು ಐದು ವರ್ಷ ಇರುವುದಾಗಿ ಹೇಳಿದ್ದಾರೆ. ದೊಡ್ಡವರು ಹೇಳಿದ ಮೇಲೆ, ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿಎಂ ನುಡಿದಂತೆ ನಡೆಯುತ್ತಿದ್ದಾರಾ ಎಂಬ ಮಾಧ್ಯಮ ಪ್ರಶ್ನೆಗೆ, ಅವರು ಎಲ್ಲವನ್ನು ಹೇಳಿದ್ದಾರಲ್ಲ. ಮುಖ್ಯಮಂತ್ರಿಯವರ ಅಧಿಕಾರವನ್ನು ನಾವುಗಳು ಯಾರೂ ಪ್ರಶ್ನೆ ಮಾಡಿಲ್ಲ. ಸಂಪುಟ ಪುನಾರಚನೆ ಬಗ್ಗೆ ಅವರೇ ಹೇಳಿದ್ದಾರೆ ಎಂದರು.
ಅನಗತ್ಯ ಊಹಾಪೋಹ ಸೃಷ್ಟಿಸಬೇಡಿ: ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಚರ್ಚಿಸಲು ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, ಅನಗತ್ಯವಾಗಿ ಊಹಾಪೋಹ ಸೃಷ್ಟಿಸಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಹಿರಿಯರ ಸಲಹೆ, ಮಾರ್ಗದರ್ಶನ ಅವಶ್ಯಕತೆ ಇದೆಯೋ, ಆಗ ನಾನು ಭೇಟಿ ಮಾಡುವೆ. ಅವರು ನಮ್ಮ ನಾಯಕರು, ನಮ್ಮ ಪಕ್ಷದ ಅಧ್ಯಕ್ಷರು. ಅವರು ಬಂದಾಗ ಅವರನ್ನು ಭೇಟಿ ಮಾಡುವುದು, ನಮ್ಮ ಕರ್ತವ್ಯ. ಶಿಷ್ಟಾಚಾರದ ಬಗ್ಗೆ ನನಗೆ ಬೇರೆಯವರಿಗಿಂತ ಹೆಚ್ಚಿನ ಅರಿವಿದೆ. ಅವರು ನಮ್ಮ ರಾಜ್ಯದವರೇ ಆದರೂ ಅವರ ಹಿರಿತನ ಹಾಗೂ ಹುದ್ದೆಗೆ ನಾವು ಗೌರವ ನೀಡಬೇಕು ಎಂದು ಉತ್ತರಿಸಿದರು.
ಮುಂದುವರೆದ ಡಿಸಿಎಂ, ವಿಧಾನಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಘೋಷಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಈ ವಿಚಾರವಾಗಿ ಗುರುವಾರ ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚೆ ಮಾಡಿರುವೆ. ನೀವುಗಳು ಚುನಾವಣೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿರುವೆ. ಅವರೆಲ್ಲರೂ ಜವಾಬ್ದಾರಿ ಪಡೆದು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮಂತ್ರಿಗಳಿಗೂ ಜವಾಬ್ದಾರಿ ನೀಡಬೇಕಿದೆ. ಇನ್ನು ಪರಿಷತ್ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರ ಆಯ್ಕೆ ವಿಚಾರವಾಗಿ ಚರ್ಚೆ ಮಾಡಿರುವೆ ಎಂದು ತಿಳಿಸಿದರು.
Laxmi News 24×7