ಶಿವಮೊಗ್ಗ: ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಹಾಗೂ ಮಲೆನಾಡಿನ ನೈಸರ್ಗಿಕ ಸಂಪತ್ತಿನ ಸೌಲಭ್ಯದ ಮೇರೆಗೆ 1936ರಲ್ಲಿ ಸ್ಥಾಪಿತವಾದ ಮೈಸೂರು ಕಾಗದ ಕಾರ್ಖಾನೆ ಈಗ ಪುನಾರಂಭವಾಗುವ ಲಕ್ಷಣಗಳು ಗೋಚರವಾಗುತ್ತಿದೆ.
ಕರ್ನಾಟಕದ ಏಕೈಕ ನ್ಯೂಸ್ ಪೇಪರ್ಗೆ ಬೇಕಾದ ಕಾಗದ ತಯಾರಾಗುತ್ತಿದ್ದದ್ದು ಇದೇ ಮೈಸೂರು ಕಾಗದ ಕಾರ್ಖಾನೆಯಿಂದ. ಇಂತಹ ಕಾರ್ಖಾನೆಯು ಸಾವಿರಾರು ಜನರಿಗೆ ಪ್ರತ್ಯಕ್ಷವಾಗಿ ಹಾಗೂ ಸಾವಿರ ಜನರಿಗೆ ಪರೋಕ್ಷವಾಗಿ ಉದ್ಯೋಗವನ್ನು ನೀಡಿತ್ತು. ಆದರೆ, ಆಡಳಿತ ನಿರ್ವಹಣೆ ಕೊರತೆಯಿಂದ ಕಾರ್ಖಾನೆಯು ಮುಚ್ಚುವ ಹಂತಕ್ಕೆ ಬಂದಿತ್ತು. ಕಾರ್ಖಾನೆಯು ಪರಿಸರ ಮಾಲಿನ್ಯ ಮಾಡುತ್ತಿದೆ ಎಂದು ಆರೋಪಿಸಿ ಕೆಲವರು ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ, ಅಲ್ಲಿಂದ ಬಂದ ಆದೇಶದ ಮೇರೆಗೆ ಕಾರ್ಖಾನೆಯನ್ನು 2016ರಲ್ಲಿ ಮುಚ್ಚಲಾಗಿತ್ತು.
ಆದರೆ, ಭದ್ರಾವತಿ ಶಾಸಕರ ಒಂದು ಮಾತಿನಿಂದ ಎಂಪಿಎಂಗೆ ಮರುಜೀವ ಸಿಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ, ತಾವು ಅಧಿಕಾರಕ್ಕೆ ಬಂದರೆ, ಇಲ್ಲಿನ ಕಾಗದ ಕಾರ್ಖಾನೆ ಪ್ರಾರಂಭಿಸುವುದಾಗಿ ಘೋಷಿಸಿತ್ತು. ಅದರಂತೆ ಈಗ ರಾಜ್ಯ ಸರ್ಕಾರವು ಎಲ್ ಅಂಡ್ ಟಿ ಕಂಪನಿ ಜೊತೆ ಮಾತುಕತೆ ನಡೆಸಿದ್ದು, ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿ ಕಾರ್ಖಾನೆ ಪುನಾರಂಭ ಮಾಡುವ ಕುರಿತು ಮಾತುಕತೆ ನಡೆಸಿದೆ.
ಎಂಪಿಎಂ ಕಾರ್ಖಾನೆಗೆ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಇಲ್ಲಿ ನೀಲಗಿರಿ, ಅಕೇಶಿಯಾ ಮರಗಳನ್ನು ಬೆಳೆಸಲಾಗಿದೆ. ಕೇಂದ್ರ ಸರ್ಕಾರ ಅಕೇಶಿಯಾ ಮರ ನೆಡುವುದಕ್ಕೆ ತಡೆ ನೀಡಿದೆ. ಕೇಂದ್ರ ಸರ್ಕಾರ ಅಕೇಶಿಯಾ ಮರ ಕಡಿಯಲು ಅನುಮತಿ ನೀಡಿದರೆ, ಎಲ್ ಅಂಡ್ ಟಿ ಕಂಪನಿಯು ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ರೆಡಿ ಇದೆ ಎನ್ನಲಾಗುತ್ತಿದೆ. ಕಾರ್ಖಾನೆ ಪ್ರಾರಂಭವಾದರೆ ಭದ್ರಾವತಿ ಜನತೆಗೆ ಉದ್ಯೋಗ ಲಭ್ಯವಾಗುತ್ತದೆ ಹಾಗೂ ಪತ್ರಿಕಾ ಮುದ್ರಕರಿಗೂ ತುಂಬಾ ಅನುಕೂಲವಾಗುತ್ತದೆ.
Laxmi News 24×7