ದಾವಣಗೆರೆ: ಹಳೇ ದಾವಣಗೆರೆ ಭಾಗದಲ್ಲಿ ಹೆಚ್ಚು ಅಲ್ಪಸಂಖ್ಯಾತ ಕುಟುಂಬಗಳು ವಾಸಿಸುತ್ತಿವೆ. ಕೂಲಿ ಕಾರ್ಮಿಕರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಕಟ್ಟಡ ಕಾರ್ಮಿರು ಸೇರಿ ಬರೋಬ್ಬರಿ 80 ಸಾವಿರ ಜನಸಂಖ್ಯೆ ಇದೆ. ಆದರೆ, ಇಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಇದಕ್ಕಾಗಿ ಜನ ದಶಕಗಳಿಂದ ಹೋರಾಟ ಮಾಡ್ತಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೆ ಇಲ್ಲಿಯ ಜನ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
ಚಿಕಿತ್ಸೆಗಾಗಿ ಇಲ್ಲಿನ ಜನ ರೈಲ್ವೆ ಹಳಿ ದಾಟಿ ಸಿಜಿ ಆಸ್ಪತ್ರೆ ಸೇರಿದಂತೆ ಇತರ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ, ಅವುಗಳಲ್ಲಿ ಅನೇಕ ಸಮಸ್ಯೆಗಳಿವೆ. ಆಂಬ್ಯುಲೆನ್ಸ್ ಇಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಕಲ ಸೌಲಭ್ಯ ಕೊಡ್ತಿವಿ ಎಂದ ಜನಪ್ರತಿನಿಧಿಗಳು ಮೈಮರೆತು ಕೂತಿದ್ದಾರೆ. ಇನ್ನು ಚುನಾವಣೆ ಮುನ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಡಿಗ್ರಿ ಕಾಲೇಜು ಕೊಡ್ತಿವಿ ಎಂಬ ಆಶ್ವಾಸನೆ, ಆಶ್ವಾಸನೆಯಾಗಿಯೇ ಉಳಿದಿದೆ.
ದಾವಣಗೆರೆ ದಕ್ಷಿಣ ಮತ ಕ್ಷೇತ್ರದಲ್ಲಿ 80 ಸಾವಿರ ಅಲ್ಪಸಂಖ್ಯಾತ ಮತದಾರರಿದ್ದಾರೆ. ಸುಸಜ್ಜಿತವಾದ ಆಸ್ಪತ್ರೆ ಕೂಗು ದಶಕಗಳಿಂದ ಕೇಳಿಬರುತ್ತಿದೆ. ಆದರೂ ಆ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಜನ ಮಾತ್ರ ಭಾಷಾ ನಗರ, ಆಜಾದ್ ನಗರದ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೇ ನೆಚ್ಚಿಕೊಂಡಿದ್ದಾರೆ. ತುರ್ತು ಸಂಧರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಜನ ರೈಲ್ವೆ ಹಳಿ ದಾಟಿ ಇತರ ಆಸ್ಪತ್ರೆಗೆ ಹೋಗಬೇಕಾಗಿದೆ. ದಕ್ಷಿಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅಲ್ಲಿ ಹೆರಿಗೆ ತಜ್ಞರು, ಸಿ ಸೆಕ್ಷನ್ ಮಾಡುವ ವ್ಯವಸ್ಥೆ, ಸ್ಕ್ಯಾನಿಂಗ್ ವ್ಯವಸ್ಥೆ, ರೋಗಿಗಳನ್ನು ಸಾಗಿಸುವ ಆಂಬ್ಯುಲೆನ್ಸ್ ಸೇವೆ ಇಲ್ಲ. ಗರ್ಭಿಣಿಯರಿಗೆ ಹೆರಿಗೆ ನೋವು ಆರಂಭವಾದರೆ ಚಿಗಟೇರಿ ಜಿಲ್ಲಾಸ್ಪತ್ರೆ, ಹೆರಿಗೆ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇಂದಿಗೂ ಇದೆ.
ನಮಗೆ ಮೂಲ ಸೌಲಭ್ಯ ಕಲ್ಪಿಸಿಕೊಡಿ: ಸ್ಥಳೀಯ ಎಂ. ಅಬ್ದುಲ್ ರೆಹಮಾನ್ ಸಾಬ್ ಪ್ರತಿಕ್ರಿಯಿಸಿ, “ನಮಗೆ ಮೂಲಭೂತ ಸೌಲಭ್ಯಗಳು ಬೇಕು, ಅವುಗಳ ಮರೀಚಿಕೆ ಆಗಿದೆ. ಇಲ್ಲಿಗೆ ಆಸ್ಪತ್ರೆ, ಕಾಲೇಜು ಬೇಕು. ಮಕ್ಕಳು ವಿದ್ಯಾವಂತರಾಗಬೇಕು, ಕೂಲಿ ಕೆಲಸ ಮಾಡುವವರು ಮಕ್ಕಳನ್ನು ಖಾಸಗಿ ಕಾಲೇಜಿಗೆ ಕಳಿಹಿಸಲು ಸಾಧ್ಯವಿಲ್ಲ, ಅದಕ್ಕೆ ಸರ್ಕಾರಿ ಕಾಲೇಜು ಬೇಕು. 1969 ರಿಂದ ನೋಡುತ್ತಿದ್ದೇನೆ, ಇಲ್ಲಿನ ಪರಿಸ್ಥಿತಿ ಹೀಗೆ ಇದೆ. ಆಸ್ಪತ್ರೆ ಹೋಗಬೇಕೆಂದರೆ ರೈಲ್ವೆ ಹಳಿ ದಾಟಿ ಹೋಗಬೇಕು, ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ರವಾನಿಸಲು ಆಂಬ್ಯುಲೆನ್ಸ್ ಕೊರತೆ ಇದೆ. ಇಲ್ಲಿ 80 ಸಾವಿರ ಮತದಾರರಿದ್ದು, ಮತದಾನ ಮಾಡ್ತಿದ್ದೇವೆ. ಇಬ್ಬರನ್ನೇ ಗೆಲ್ಲಿಸುತ್ತಿದ್ದೇವೆ. ಅದರೆ, ಈ ಭಾಗದಲ್ಲಿ ಸೌಕರ್ಯಗಳ ಮರೀಚಿಕೆಯಾಗಿದೆ. ಚುನಾವಣೆ ಮುನ್ನ ಮೂಲ ಸೌಲಭ್ಯಗಳನ್ನು ಕಲ್ಪಸುತ್ತೇವೆ, ಕಾಲೇಜು, ಆಸ್ಪತ್ರೆ ಕೊಡ್ತಿವೆ ಎನ್ನುತ್ತಾರೆ. ನನಗೆ 74 ವರ್ಷ, ಅಂದಿನಿಂದಲೂ ಹೀಗೆ ಇದೆ. ಭಾಷಾನಗರ, ಆಜಾದ್ ನಗರ, ಅಹ್ಮದ್ ನಗರ, ಎಸ್ಎಸ್ ಮಲ್ಲಿಕಾರ್ಜುನ ನಗರ, ಇನ್ನಿತರ ನಗರಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಎಂದರು.
Laxmi News 24×7