ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಅರಿಶಿನ – ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ.
ಆಗಸ್ಟ್ 8 ರಂದು ಲಗ್ಗೆರೆ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಗೀತಾ (23) ಸ್ಥಳದಲ್ಲೇ ಸಾವನ್ನಪ್ಪಿದ್ದು, ರಸ್ತೆಯಲ್ಲಿ ಆಕೆಯ ಪತಿ ಸುನೀಲ್ ಅವರ ರೋಧನೆ ಅಲ್ಲಿದ್ದವರ ಮನಕಲುಕುವಂತೆ ಮಾಡಿದೆ. ಅತ್ತ ಚೆನ್ನಪಟ್ಟಣದಲ್ಲಿರುವ ಗೀತಾ ಅವರ ಅಜ್ಜಿ ಸಹ ಮೊಮ್ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಗೀತಾ ಹಾಗೂ ಸುನೀಲ್ ಮಲ್ಲೇಶ್ವರಂನಲ್ಲಿ ವಾಸವಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವಿದ್ದ ಕಾರಣ ಸುನೀಲ್ ಸಹೋದರಿಯ ಮನೆಗೆ ಅರಿಶಿನ – ಕುಂಕುಮಕ್ಕೆಂದು ಗೀತಾ ಅವರನ್ನು ಆಹ್ವಾನಿಸಲಾಗಿತ್ತು. ಲಗ್ಗೆರೆ ಮೇಲ್ಸೇತುವೆ ಬಳಿ ದಂಪತಿ ತೆರಳುತ್ತಿದ್ದ ಬೈಕ್ಗೆ ಹತ್ತು ಚಕ್ರದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಇಬ್ಬರು ನೆಲಕ್ಕೆ ಬಿದ್ದಿದ್ದರು.
ಈ ವೇಳೆ ತಲೆಗೆ ಗಂಭೀರವಾಗಿ ಗಾಯಗೊಂಡ ಗೀತಾ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಸುನೀಲ್ ಅವರಿಗೂ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಸುರೇಶ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.