ಮಂಗಳೂರು: ಹಲವು ತಿಂಗಳಿನಿಂದ ಅಸ್ತಮಾ ಎಂದುಕೊಂಡು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ.
ಅಸ್ತಮಾ ಅಥವಾ ಯಾವುದೇ ಅಲರ್ಜಿಯ ಲಕ್ಷಣ ಹೊಂದಿರದ 50 ವರ್ಷದ ವ್ಯಕ್ತಿಯೊಬ್ಬರು ಕಳೆದ 6 ತಿಂಗಳಿನಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಉಬ್ಬಸ ಸಮಸ್ಯೆಯನ್ನು ಅಸ್ತಮಾ ಎಂದು ತಿಳಿದು ಸಾಕಷ್ಟು ಕಡೆ ಚಿಕಿತ್ಸೆ, ಬ್ರೊಂಕೊಡೈಲೇಟರ್ ಥೆರಪಿ ಪಡೆದರೂ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ.
ಆದರೆ ಈಗ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಮತ್ತು ಹಿರಿಯ ಪಲ್ಮನೊಲಾಜಿಸ್ಟ್ ಡಾ. ವಿಶಾಖ ಆಚಾರ್ಯ, ಹಿರಿಯ ಕನ್ಸಲ್ಟೆಂಟ್ ಅರವಳಿಕೆತಜ್ಞ ಡಾ ಸುನೀಲ್ ಬಿ ವಿ, ಕನ್ಸಲ್ಟೆಂಟ್ ಪಲ್ಮೊನೊಲಾಜಿಸ್ಟ್ ಡಾ. ಉದಯ, ಅರವಳಿಕೆ ತಜ್ಞ ಡಾ. ಫ್ರೇಡಾ, ಬ್ರೊಂಕೊಸ್ಕಾಪಿ ಅಸಿಸ್ಟೆಂಟ್ ಮಗ್ಡೆಲಿನಾ ಪೈಸ್, ಮಲ್ಲೇಶ್ ಪಿ, ಸುಮಿತ್ರಾ, ರೀಮಾ ಡಿಸೋಜಾ, ಸಂಯೋಜಕಿ ಸೈರಾ ಡಿಸೋಜಾ ಅವರ ತಂಡ ರೋಗಿಗೆ ಅವರ ಸಾಮಾನ್ಯ ಜೀವನವನ್ನು ಪುನರ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕಿತ್ಸೆಯ ಭಾಗವಾಗಿ ರೋಗಿಯ ಕುರಿತು ವಿಚಾರಿಸಿದಾಗ, ಕೆಲವು ತಿಂಗಳ ಹಿಂದೆ ಕಡಲೆಕಾಯಿ ಗಂಟಲಿಗೆ ಸಿಲುಕಿದ್ದ ಬಗ್ಗೆ ಜ್ಞಾಪಿಸಿಕೊಂಡಿದ್ದಾರೆ. ಆದರೆ ನೀರು ಸೇವಿಸಿದ ಬಳಿಕ ಸಮಸ್ಯೆ ಕಡಿಮೆಯಾಯಿತು ಎಂದೂ ತಿಳಿಸಿದ್ದಾರೆ. ಆದರೆ ಈ ಘಟನೆ ಬಳಿಕ ಉಬ್ಬಸ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗಿದೆ. ತಪಾಸಣೆಯಲ್ಲಿ ಅಸ್ತಮಾದ ಲಕ್ಷಣವಲ್ಲ ಎಂದು ತಿಳಿದ ವೈದ್ಯರು ಎಕ್ಸ್ರೇ ನಡೆಸಿದಾಗ ಬಲ ಡಯಾಫ್ರಾಮ್ನಲ್ಲಿ ಉಬ್ಬು ಪತ್ತೆಯಾಗಿದೆ. ಇದರಿಂದ ಗಾಳಿ ಸುಗಮ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ ಎಂಬುದು ಗೊತ್ತಾಗಿದೆ.
ಶ್ವಾಸನಾಳದಲ್ಲಿ ಕಡಲೆಕಾಯಿ ತುಣುಕು: “ಫ್ಲೆಕ್ಸಿಬಲ್ ಬ್ರೊಂಕೊಸ್ಕಾಪಿ ತಪಾಸಣೆಯಲ್ಲಿ ಶ್ವಾಸನಾಳದಲ್ಲಿ ಕಡಲೆಕಾಯಿಯ ತುಣುಕು ಸಿಲುಕಿರುವುದು ಪತ್ತೆಯಾಗಿದೆ. ಇಂಥದ್ದೊಂದು ಪ್ರಕರಣ ಅಪರೂಪ. ಆರೋಗ್ಯವಂತ ವ್ಯಕ್ತಿಯಲ್ಲಿ ಉಬ್ಬಸ, ಉಸಿರಾಟದ ಸಮಸ್ಯೆ ಕಂಡುಬಂದಾಗ ಹೊರಗಿನ ವಸ್ತು ದೇಹದಲ್ಲಿ ಸಿಲುಕಿರುವ ಸಾಧ್ಯತೆ ಇರುತ್ತದೆ. ಪರಿಶೀಲಿಸುವ ಅಗತ್ಯತೆಯನ್ನು ಇದು ಒತ್ತಿ ಹೇಳುತ್ತದೆ” ಎಂದು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಮತ್ತು ಹಿರಿಯ ಪಲ್ಮನೊಲಾಜಿಸ್ಟ್ ಡಾ. ವಿಶಾಖ ಆಚಾರ್ಯ ತಿಳಿಸಿದರು.
Laxmi News 24×7