ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ 14ನೇ ಮಹಡಿಯಲ್ಲಿ ರೀಲ್ಸ್ ಮಾಡುವ ವೇಳೆ ಕಾಲುಜಾರಿಬಿದ್ದು ಯುವತಿ ಮೃತಪಟ್ಟಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಆಂಧ್ರದ ಬೋಯಲ ನಂದಿನಿ (21) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಚಿತ್ತೂರು ಮೂಲದ ನಂದಿನಿ ಬಿಕಾಂ ಪದವೀಧರೆಯಾಗಿದ್ದು, ನಗರದ ಭುವನೇಶ್ವರಿ ಲೇಔಟ್ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದಳು. ರಿಲಯನ್ಸ್ ಮಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ನಂದಿನಿ, ಸೋಮವಾರ ಕೆಲಸದಿಂದ ಸಾಯಂಕಾಲ ವಾಪಸ್ ಬಂದಿದ್ದಳು. ತನ್ನ ಸ್ನೇಹಿತೆ ಹಾಗೂ ಇಬ್ಬರು ಸ್ನೇಹಿತರ ಜತೆ ಮಾತನಾಡಿ ಪಾರ್ಟಿ ಮಾಡುವ ಸಲುವಾಗಿ ರಾಯಸಂದ್ರ ಮುಖ್ಯರಸ್ತೆ ಸಮೀಪವಿರುವ ನಿರ್ಮಾಣ ಹಂತದಲ್ಲಿಯೇ ಇರುವ ಅಪಾರ್ಟ್ಮೆಂಟ್ವೊಂದಕ್ಕೆ ಆಗಮಿಸಿದ್ದರು. ನಾಲ್ವರು ರಾತ್ರಿ 9 ಗಂಟೆಯವರೆಗೂ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿದ ಬಳಿಕ ಕಟ್ಟಡದ 14ನೇ ಮಹಡಿಗೆ ತೆರಳಿ ರೀಲ್ಸ್ ಮಾಡುವಾಗ ಕಾಲುಜಾರಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಸಾವಿನ ವಿಚಾರ ಗೊತ್ತಾದ ಬಳಿಕ ಮೃತ ನಂದಿನಿ ತಾಯಿಯು ನಗರಕ್ಕೆ ಆಗಮಿಸಿದ್ದು, ದೂರು ನೀಡಿದ್ದಾರೆ. ಮಗಳು ನಂದಿನಿ ಜತೆಗಿದ್ದ ಇಬ್ಬರು ಯುವಕರು ಹಾಗೂ ಸ್ನೇಹಿತೆಯನ್ನು ವಿಚಾರಣೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ. ಈ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.
Laxmi News 24×7