ಬೆಂಗಳೂರು: ಭ್ರಷ್ಟಾಚಾರದಲ್ಲಿ ನನ್ನ ಕೈವಾಡ ಇದ್ದರೆ ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ. ಬಡವರ ಮನೆಯ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು.
ಇಂದು ಸರ್ಕಾರಿ ನಿವಾಸದ ಬಳಿ ಮಾತನಾಡಿದ ಅವರು, ಬಿ.ಆರ್.ಪಾಟೀಲ್ ನನ್ನ ಮೇಲೆ ಆರೋಪ ಮಾಡಿಲ್ಲ. ನಾನು ಕೊಟ್ಟ ಪತ್ರಕ್ಕೆ ಮನೆ ಕೊಟ್ಟಿಲ್ಲ ಎಂದಿದ್ದಾರೆ. ಪಂಚಾಯತಿ ಮೇಲೆ ಆರೋಪ ಮಾಡಿದ್ದಾರೆ. ಪ್ರತಿ ಪಂಚಾಯತಿಗೆ 900 ಮನೆ ನೀಡಲಾಗಿದೆ. ಎರಡು ಸಾವಿರ ಮನೆ ಕೇಳಿದ್ರೆ 900 ಮನೆ ನೀಡಲಾಗಿದೆ. ಶಾಸಕರು ಕೊಟ್ಟ ಮನವಿ ನಮ್ಮ ಬಳಿ ಇವೆ. ಬಿ.ಆರ್.ಪಾಟೀಲ್ ಹಿರಿಯರಿದ್ದಾರೆ. ಯಾಕೆ ಆರೋಪ ಮಾಡಿದ್ರೋ ಗೊತ್ತಿಲ್ಲ ಎಂದರು.
ದುಡ್ಡು ಪಡೆದು ಮನೆ ಕೊಟ್ಟರೆ ಹುಳ ಬಿದ್ದು ಸಾಯುತ್ತೇವೆ: ಬಿಜೆಪಿಗರು ಹೇಳುವುದೇ ಬೇಡ ನಾನೇ ರಾಜೀನಾಮೆ ನೀಡುತ್ತೇನೆ. ಯಾರ ಬಳಿಯೂ ನಾವು ದುಡ್ಡು ಪಡೆದು ಮನೆ ಕೊಟ್ಟಿಲ್ಲ. ರಾಮನಗರಕ್ಕೆ ಕೂಡ ಮನೆ ಕೊಟ್ಟಿದ್ದೇವೆ. ಎಲ್ಲರಿಗೂ ಮನೆ ಕೊಟ್ಟಿದ್ದೇವೆ. ದುಡ್ಡು ಪಡೆದು ಮನೆ ಕೊಟ್ಟರೆ ಹುಳ ಬಿದ್ದು ಸಾಯುತ್ತೇವೆ. ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತಾ?. ಯಾರು ಹಣ ಪಡೆದಿದ್ದಾರೆ ಎಂದು ಪಾಟೀಲ್ ಹೇಳಲಿ. ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಕೇಂದ್ರ ಸರ್ಕಾರ 1.50 ಲಕ್ಷ ರೂ. ಮಾತ್ರ ನೀಡುತ್ತೆ. ರಾಜ್ಯ ಸರ್ಕಾರ ಕೂಡ ಒಂದೂವರೆ ಲಕ್ಷ ಕೊಡುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಜಿಎಸ್ಟಿ ಹಾಕಿದೆ. ಜಿಎಸ್ಟಿ ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೆವು. ಬಾಕಿ ಹಣ ಫಲಾನುಭವಿಗಳು ನೀಡಬೇಕು. ಆದ್ರೆ ಫಲಾನುಭವಿಗಳ ಹಣ ಸಮರ್ಪಕವಾಗಿ ಬಂದಿಲ್ಲ. ಹೀಗಾಗಿ ಮನೆಗಳು ಕಂಪ್ಲೀಟ್ ಆಗಿಲ್ಲ. ಸರ್ಕಾರವೇ ದುಡ್ಡು ಹಾಕಿ ಮನೆ ಕಂಪ್ಲೀಟ್ ಮಾಡಲಾಗುತ್ತಿದೆ. ಮುಂದಿನ ತಿಂಗಳು 42 ಸಾವಿರ ಮನೆಗನ್ನು ಕೋಡುತ್ತೇವೆ ಎಂದರು.
ನಾಲ್ಕು ವರ್ಷಗಳಿಂದ ಹೊಸ ಮನೆಗಳನ್ನು ಕೊಟ್ಟಿಲ್ಲ: ಈಗ 9 ಲಕ್ಷ ಮನೆಗಳ ನಿರ್ಮಾಣ ಆಗುತ್ತಿದೆ. ನಾಲ್ಕು ವರ್ಷಗಳಿಂದ ಹೊಸ ಮನೆಗಳನ್ನು ಕೊಟ್ಟಿಲ್ಲ. ನಾನು ಈ ಬಗ್ಗೆ ಸಿಎಂ ಅವರ ಗಮನಕ್ಕೆ ತಂದೆ. ಬಜೆಟ್ನಲ್ಲಿ ಘೋಷಣೆ ಮಾಡಲು ಮನವಿ ಮಾಡಿದ್ದೆ. ಸಿಎಂ ಅವರು ಕೂಡ ಒಪ್ಪಿದ್ರು. ಆದ್ರೆ ಆರ್ಥಿಕ ಇಲಾಖೆ ಬೇಡ ಅಂತ ಹೇಳಿತು. ಸದ್ಯ 9 ಲಕ್ಷ ಮನೆಗಳ ಕೆಲಸ ನಡೆಯುತ್ತಿದೆ. ಅವು ಮುಗಿಯುವವರೆಗೂ ಹೊಸ ಮನೆ ಘೋಷಣೆ ಮಾಡುವುದು ಬೇಡ ಎಂದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.