ಹುಬ್ಬಳ್ಳಿ, ಜೂನ್ 18: ಇದೊಂದು ವಿಚಿತ್ರ ಪ್ರಕರಣ. ಬೆಂಗಳೂರು (Bengaluru) ಮೂಲದ ಯುವತಿ ಗೋವಾದಲ್ಲಿ (Goa) ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿ ಕೂಡ ಬೆಂಗಳೂರು ನಿವಾಸಿಯಾಗಿದ್ದಾನೆ. ಆದರೆ, ಆರೋಪಿ ಸಿಕ್ಕಿಬಿದ್ದಿದ್ದು ಹುಬ್ಬಳ್ಳಿಯಲ್ಲಿ (Hubballi). ಪ್ರೀತಿಸಿದ ಹುಡಗಿಯ ಕತ್ತುಸೀಳಿ ಕೊಲೆ ಮಾಡಿದ ಪ್ರಿಯಕರ ಹುಬ್ಬಳ್ಳಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಬೆಂಗಳೂರಿನ ಲಿಂಗರಾಜಪುರ ಬಡಾವಣೆಯ ಡಾನ್ ಬಾಸ್ಕೋ ಶಾಲೆ ಸಮೀಪ ವಾಸವಾಗಿದ್ದ 22 ವರ್ಷದ ರೋಶನಿ ಗೋವಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ.
ಗೋವಾ ರಾಜ್ಯದ ಪೋಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪನಗರ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಜೂನ್ 16 ರಂದು ರೋಶನಿ ಶವ ಸಿಕ್ಕಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು, ರೋಶನಿ ಹಿನ್ನೆಲೆ ಕಲೆಹಾಕಲು ಆರಂಭಿಸಿದರು. ಆಗ, ಕೆಲ ದಿನಗಳ ಹಿಂದಷ್ಟೇ ರೋಶನಿ ತಾನು ವಾಸವಾಗಿರುವ ಲಿಂಗರಾಜಪುರ ಬಡಾವಣೆಯ ನಿವಾಸಿಯಾಗಿದ್ದ ಸಂಜಯ್ ಕೇವಿನ್ ಎಂಬುವನ ಜೊತೆ ಗೋವಾಕ್ಕೆ ಬಂದಿರುವ ವಿಚಾರ ಗೊತ್ತಾಗಿದೆ.
ಗೋವಾದಲ್ಲಿ ಮದುವೆಯಾಗಲು ನಿರ್ಧರಿಸಿದ್ದ ಪ್ರೇಮಿಗಳು
ರೋಶನಿ ಮತ್ತು ಸಂಜಯ್ ಕೇವಿನ್ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆಯಾಗಲು ಇಬ್ಬರು ನಿರ್ಧರಿಸಿದ್ದರಂತೆ. ಗೋವಾದಲ್ಲಿಯೇ ಮದುವೆಯಾಗಲು ನಿರ್ಧರಿಸಿ ಇಬ್ಬರು ಕೆಲ ದಿನಗಳ ಹಿಂದೆ ಗೋವಾಕ್ಕೆ ಬಂದಿದ್ದರಂತೆ. ಆದರೆ, ಗೋವಾದಲ್ಲಿ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪವಾಗಿದೆ. ಇದೇ ಕಾರಣದಿಂದ, ಪ್ರಿಯಕರ ಸಂಜಯ್ ಕೆವಿನ್ ಪ್ರೇಯಸಿ ರೋಶನಿಯನ್ನು ಕತ್ತು ಸೀಳಿ ಕೊಲೆ ಮಾಡಿ, ಗೋವಾ ಹೊರವಲಯದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗೋವಾದ ಪೋಂಡಾ ಪೊಲೀಸರು, ತನಿಖೆ ಆರಂಭಿಸಿದರು. ಗೋವಾದಲ್ಲಿ ಕೊಲೆ ಮಾಡಿದ್ದ ಆರೋಪಿ, ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೋಶನಿಯನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಂಜಯ್ ಕೆವಿನ್, ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.