ಬೆಳಗಾವಿ: ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಜಾತಿ ಭೇದ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸುತ್ತಿದೆ. ಈ ರೀತಿ ಬೇರೆ ಜಾತಿಯ ವರ-ವಧು ಮದುವೆ ಆದಲ್ಲಿ ಅವರಿಗೆ ಸರ್ಕಾರ ಸಹಾಯಧನ ನೀಡಿ ಆರ್ಥಿಕ ಶಕ್ತಿ ತುಂಬುತ್ತಿದೆ.
ಅಂತರ್ಜಾತಿ ವಿವಾಹ ಎಂದರೆ ವಧು ಮತ್ತು ವರ ಬೇರೆ ಬೇರೆ ಜಾತಿಗೆ ಸೇರಿದವರಾಗಿರಬೇಕು. ಹೀಗೆ ಮದುವೆ ಆಗಿರುವ ಆ ದಂಪತಿಗೆ ಸಹಾಯಧನವನ್ನು 1989ರಿಂದ ಕರ್ನಾಟಕ ರಾಜ್ಯದಲ್ಲಿ ನೀಡಲಾಗುತ್ತಿದೆ. ಆರಂಭದಲ್ಲಿ 12 ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು. ಇದಾದ ಬಳಿಕ 25 ಸಾವಿರ ರೂ., 50 ಸಾವಿರ ರೂ., 1 ಲಕ್ಷ ರೂ., 2 ಲಕ್ಷ ರೂ. ಸಹಾಯಧನ ನೀಡುತ್ತಾ ಬರಲಾಗಿದೆ.
2018ರಿಂದ ಸಹಾಯಧನವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿ ಹುಡುಗನ ಮದುವೆ ಆದರೆ 3 ಲಕ್ಷ ರೂ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹುಡುಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾದರೆ 2.5 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಹೆಚ್ಚಿಸಿದ್ದು, ಆ ಪ್ರಕಾರವೇ ಸಹಾಯಧನ ಫಲಾನುಭವಿಗಳ ಕೈ ಸೇರುತ್ತಿದೆ. ಆ ಹಣವು ಫಲಾನುಭವಿಗಳ ಬದುಕಿಗೆ ನೆರವಾಗಿದ್ದು, ಉತ್ತಮ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎರಡು ಇಲಾಖೆಯಡಿ ಪ್ರತ್ಯೇಕವಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿ, ಹಣ ಮಂಜೂರು ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗೆ ಕಳೆದ 2019-20ರಿಂದ 2024-25ರ ವರೆಗೆ 747 ಫಲಾನುಭವಿಗಳಿಗೆ ಹಣ ಜಮೆ ಆಗಿದೆ. ಅದೇ ರೀತಿ ಪರಿಶಿಷ್ಟ ಪಂಗಡಕ್ಕೆ 299 ದಂಪತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಈವರೆಗೆ ಒಟ್ಟು 16 ಕೋಟಿ ಅನುದಾನ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.