ಬೆಳಗಾವಿ: ಬೆಳಗಾವಿ, ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಅಗ್ರಸಾಲಿನಲ್ಲಿದೆ. ಕುಂದಾನಗರಿಯಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಅಧಿಕವಾಗಿದೆ. ಆದರೆ, ಕಳೆದ 18 ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಬೆಳಗಾವಿ ಮಹಾನಗರದಲ್ಲಿ ಸ್ವಂತ ಸೂರಿನ ಕನಸು ಹೊತ್ತ ಮಧ್ಯಮ ವರ್ಗದವರ ಕನಸು ಕನಸಾಗಿಯೇ ಉಳಿದಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಹೆಸರಿಗಷ್ಟೇ ಎಂಬಂತಾಗಿದ್ದು, ಕಳೆದ ಹದಿನೆಂಟು ವರ್ಷಗಳಿಂದಲೂ ಕೂಡ ಒಂದೇ ಒಂದು ಹೊಸ ಬಡಾವಣೆ ನಿರ್ಮಾಣ ಮಾಡದಷ್ಟು ಆಡಳಿತ ಜಿಡ್ಡುಗಟ್ಟಿ ಹೋಗಿದೆ. ನಗರದ ಜನಸಂಖ್ಯೆ ಬೆಳೆದಂತೆ ವಿಸ್ತೀರ್ಣವೂ ಹೆಚ್ಚಾಗುತ್ತಿದೆ. ಆದರೆ, ಸರಿಸುಮಾರು ಇಪ್ಪತ್ತು ವರ್ಷ ಕಳೆಯುತ್ತ ಬಂದರೂ ಕೂಡ, ಹೊಸ ಬಡಾವಣೆ ನಿರ್ಮಿಸಿ ಮಧ್ಯಮ ವರ್ಗದ ಜನರಿಗೆ ಸೂರು ಒದಗಿಸಬೇಕಾದ ಬುಡಾ ಕಣ್ಮುಚ್ಚಿ ಕುಳಿತಿದೆ ಎಂಬ ದೂರು ಸಾರ್ವಜನಿಕರದ್ದು.
ಕುಮಾರಸ್ವಾಮಿ ಲೇಔಟ್ ಆದ ಬಳಿಕ ಸುಮಾರು 18 ವರ್ಷಗಳಿಂದ ಒಂದೇ ಒಂದು ಬಡಾವಣೆ ನಗರದಲ್ಲಿ ತಲೆ ಎತ್ತಿಲ್ಲ. ಆದ್ದರಿಂದ ಸೈಟ್ಗಳ ಬೆಲೆ ಗಗನಕ್ಕೇರಿದ್ದು, 30-40 ಸೈಟ್ನ ಬೆಲೆ 50 ಲಕ್ಷ ರೂಪಾಯಿಗೆ ಬಂದು ನಿಂತಿದೆ. ಹಾಗಾಗಿ, ಜಾಗ ಖರೀದಿಸಿ ಸ್ವಂತ ಮನೆ ಕಟ್ಟಿಕೊಳ್ಳುವ ಮಧ್ಯಮ ವರ್ಗದ ಜನರ ಕನಸು ಕನಸಾಗಿಯೇ ಉಳಿಯುವಂತಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರ ಎಲ್ಲೋ ಝೋನ್ (ವಸತಿ ಪ್ರದೇಶಕ್ಕಾಗಿ ಮೀಸಲು) ವಿಂಗಡಿಸಿದ ಬಳಿಕ ಭೂಪರಿವರ್ತನೆ ಅಗತ್ಯವಿಲ್ಲ ಎಂಬ ವಾದವೂ ಇದೇ. ಏಕೆಂದರೆ, ಭೂಪರಿವರ್ತನೆ ಪ್ರಕ್ರಿಯೆ ವಿಳಂಬವಾಗುತ್ತಿರುವುದೂ ಕೂಡ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಹಿನ್ನಡೆಯಾಗುತ್ತಿದೆ. ಅಷ್ಟೇ ಅಲ್ಲದೇ ಖಾಸಗಿ ಲೇಔಟ್ ಗಳ ಹಾವಳಿ, ಬಿಲ್ಡರ್ ಗಳ ಲಾಬಿಯೂ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಸಾರ್ವಜನಿಕರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, “ಈಗಾಗಲೇ ಬುಡಾ ವತಿಯಿಂದ 500 ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಅದೇ ರೀತಿ ಬೆಳಗಾವಿ ಸುತ್ತಲಿನ 51 ಗ್ರಾಮಗಳನ್ನು ಬುಡಾ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತಿದೆ. ಜನರು ಕೂಡ ಆಸಕ್ತಿ ವಹಿಸಿ ಭೂಮಿ ಕೊಡುತ್ತಿದ್ದಾರೆ. ಆದರೆ, ಖಾಸಗಿ ಲೇಔಟ್ ಹಾವಳಿಯೇ ಹೆಚ್ಚಾಗಿದೆ. ಇದರಿಂದ ಬಡವರಿಗೆ ಕಡಿಮೆ ದರದಲ್ಲಿ ನಿವೇಶನಗಳು ಸಿಗುತ್ತಿಲ್ಲ. ಬರುವ ದಿನಗಳಲ್ಲಿ ಬುಡಾದಿಂದ ಲೇಔಟ್ ನಿರ್ಮಿಸಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ಅದೇ ರೀತಿ ಅನಧಿಕೃತ ಲೇಔಟ್ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಗುವುದು” ಎಂದರು.