ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಇತರೆ ಮೂಲಗಳಿಂದ ಸಂಗ್ರಹಿಸುವ ಆದಾಯ ಪ್ರಮಾಣ ಏರಿಕೆ ಆಗಿದೆ. ಶಕ್ತಿ ಯೋಜನೆಯ ಹೊರತಾಗಿಯೂ ಸಂಸ್ಥೆ ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟರ ಮಟ್ಟಿಗೆ ಸಶಕ್ತವಾಗುವತ್ತ ಸಾಗಿದೆ.
ಹೌದು, ಶಕ್ತಿ ಯೋಜನೆ ಆರಂಭವಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇದು ಸಾರಿಗೆ ಸಂಸ್ಥೆಯ ಲಾಭದತ್ತ ಸಾಗಲು ಮುನ್ನುಡಿ ಬರೆದಿದೆ. 2023–24 ಹಣಕಾಸು ವರ್ಷದಲ್ಲಿ ಸಾರಿಗೆಯಿಂದ ₹2,069 ಕೋಟಿ ಮತ್ತು ಸರಕು ಸಾಗಣೆ, ಬಾಡಿಗೆ ಸೇರಿ ಇತರೆ ಮೂಲಗಳಿಂದ ₹164 ಕೋಟಿ ಆದಾಯ ಸಂಗ್ರಹಿಸಿತ್ತು. ಸಾರಿಗೆ ಸಂಬಂಧಿತ ವಿವಿಧ ಯೋಜನೆಗಳ ಜಾರಿಯಿಂದ ಸರ್ಕಾರವು 140 ಕೋಟಿ ರೂ. ಮರು ಪಾವತಿ ಮಾಡಿತ್ತು. ಸಂಸ್ಥೆಗೆ ಒಟ್ಟಾರೆ ₹2,373 ಕೋಟಿ ಆದಾಯ ಪ್ರಮಾಣ ದಾಖಲಾಗಿತ್ತು. ಇದೇ ಅವಧಿಯಲ್ಲಿ ಸಾರಿಗೆ ಕಾರ್ಯಾಚರಣೆಗೆ ಸಂಸ್ಥೆಯು ₹2,695 ಕೋಟಿ ವೆಚ್ಚ ಮಾಡಿತ್ತು. ಹೀಗಾಗಿ ಸಂಗ್ರಹಿಸಿದ ಆದಾಯ ಮತ್ತು ಮಾಡಿದ ವೆಚ್ಚಕ್ಕೆ ಹೋಲಿಸಿದರೆ ಸಂಸ್ಥೆಗೆ ₹322 ಕೋಟಿ ನಷ್ಟವಾಗಿತ್ತು.
ಕಳೆದ ಮಾರ್ಚ್ 31ಕ್ಕೆ ಕೊನೆಯಾದ 2024–25ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ಆದಾಯ ಪ್ರಮಾಣವು ಹಿಂದಿನ ವರ್ಷದ ಆದಾಯಕ್ಕೆ ಹೋಲಿಸಿದರೆ, ₹413ಕೋಟಿಗೆ ಏರಿಕೆಯಾಗಿದೆ. ಆದರೂ, ನಷ್ಟದ ಹೊರೆಯಿಂದ ಹೊರ ಬರಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಾಧ್ಯವಾಗಿಲ್ಲ.
ವೆಚ್ಚ ಏರಿಕೆ: ಸಾರಿಗೆಯಿಂದ ಸಂಗ್ರಹವಾಗುವ ಆದಾಯ ಏರಿಕೆಯೊಂದಿಗೆ ಸಾರಿಗೆ ಕಾರ್ಯಾಚರಣೆಗಾಗಿ ಮಾಡುತ್ತಿರುವ ವೆಚ್ಚಗಳು ಕೂಡ ಏರಿಕೆಯಾಗಿವೆ. ಮುಖ್ಯವಾಗಿ, ಇಂಧನ ಖರೀದಿಗಾಗಿ ಹಾಗೂ ಸಿಬ್ಬಂದಿ ವೇತನ ಮತ್ತು ಪಿಂಚಣಿ ನೀಡುವುದಕ್ಕಾಗಿ ಮಾಡುವ ವೆಚ್ಚಗಳಲ್ಲಿ ಹೆಚ್ಚಳವಾಗಿದೆ.
ಈ ಕುರಿತಂತೆ ವಾಯವ್ಯ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಗಾ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಶಕ್ತಿ ಯೋಜನೆ ಜಾರಿಯಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರತಿದಿನ 25 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲಿ 16 ಲಕ್ಷ ಮಹಿಳೆಯರಿದ್ದಾರೆ. ಪ್ರತಿ ತಿಂಗಳು ನಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ. ಸರ್ಕಾರ ನಮಗೆ ಹಣಕಾಸು ನೆರವು ನೀಡುತ್ತಿದೆ. ಇಲ್ಲಿಯವರೆಗೆ ಸರ್ಕಾರದಿಂದ ನಮ್ಮ ಸಂಸ್ಥೆಗೆ ₹500 ಕೋಟಿಯಷ್ಟು ಬಾಕಿ ಬರಬೇಕಿದೆ. ಸಚಿವರ ಗಮನಕ್ಕೆ ತರಲಾಗಿದೆ. ಸರ್ಕಾರ ಕೂಡಲೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದರು.